ಕಲಬುರ್ಗಿ: ಜಿಲ್ಲೆಯ ಜನರನ್ನು ಬರದಿಂದ ರಕ್ಷಿಸಲು ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಮೆರವಣಿಗೆ ನಡೆಸಿದರು.
ಜಗತ್ ವೃತ್ತದಲ್ಲಿ ಕೆಲಕಾಲ ಧರಣಿ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾ ಪಂಚಾಯಿತಿ ಮುಂದೆ ಧರಣಿ ಕುಳಿತರು.
ಕೃಷಿ ಕಾರ್ಮಿಕರ ಅನುಕೂಲಕ್ಕಾಗಿ ಇರುವ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅನುಷ್ಠಾನದಲ್ಲಿ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದರಿಂದ ಯಾರಿಗೂ ಸರಿಯಾಗಿ ಕೂಲಿ ಸಿಗುತ್ತಿಲ್ಲ. ಮತ್ತೆ ಕೆಲವು ಕಡೆ ಪಿಡಿಒಗಳು ಯಂತ್ರ ಬಳಸಿ ಕೆಲಸ ಮಾಡಿಸಿ, ಬೇನಾಮಿ ಹೆಸರಲ್ಲಿ ಹಣ ಕಬಳಿಸುತ್ತಿದ್ದಾರೆ. ಇದಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
ಈಗಾಗಲೇ, ಚಂದನಕೇರಾ, ಬೆಡಸೂರ, ಹಾವನೂರ ಗ್ರಾಮಗಳಲ್ಲಿ ಕೆಲಸ ಮಾಡಿದವರ ಬಿಲ್ ಪಾವತಿಸಬೇಕು. ಎಲ್ಲ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲೂ ಕಾಮಗಾರಿ ಆರಂಭಿಸಬೇಕು. ದನಕರುಗಳಿಗೆ ಬೇಸಿಗೆಯಲ್ಲಿ ತೊಂದರೆಯಾಗದಂತೆ ಮೇವು ಸರಬರಾಜು ಮಾಡಬೇಕು ಎಂದೂ ಮನವಿಯಲ್ಲಿ ಕೋರಿದ್ದಾರೆ.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಉಪಾಧ್ಯಕ್ಷೆ ಮಲ್ಲಮ್ಮ ಕೊಡ್ಲಿ, ಗೌರವಾಧ್ಯಕ್ಷ ಮಹಾಂತ ಅವರೊಳ್ಳಿ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಸುರೇಶ ದೊಡ್ಡಮನಿ (ಅಫಜಲಪುರ,), ಜಗದೇವಿ ಚಂದನಕೇರಾ (ಚಿಂಚೋಳಿ), ಫಾತಿಮಾ ಫತ್ತೆಪಹಾಡ (ಕಲಬುರ್ಗಿ), ಭಾಗಣ್ಣ ದೇವನೂರ (ಆಳಂದ), ಸುಭಾಷ ಬೆಡಸೂರ (ಚಿತ್ತಾಪುರ), ಚಂದಪ್ಪ ಹಾವನೂರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೇಘರಾಜ ಕಠಾರೆ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.