ಕಲಬುರ್ಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಅಂಕಪಟ್ಟಿ ಮುದ್ರಿಸುವ ಟೆಂಡರ್ನ್ನು ನಿಯಮ ಬಾಹಿರವಾಗಿ ಮೊದಲಿನ ಸಂಸ್ಥೆಗೆ ಮುಂದುವರಿಸಲಾಗಿದೆ ಎಂಬ ದೂರಿನ ಕಾರಣ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಮಾಜಿ ಪ್ರಭಾರ ಕುಲಪತಿ ಪ್ರೊ. ಚಂದ್ರಕಾಂತ ಯಾತನೂರ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಳಗಿಯ ಮಹೇಶಕುಮಾರ್ ಎಂಬುವರು ನೀಡಿದ ದೂರು ಆಧರಿಸಿ ಪ್ರೊ. ಯಾತನೂರ, ಎನ್.ವಿ. ಬಿ.ಇಡಿ. ಕಾಲೇಜಿನ ಸಾಬಯ್ಯ ಗುತ್ತೇದಾರ, ಬಸವರಾಜ ಕುಂಬಾರ ಮತ್ತು ಮಹಿಳಾ ವಸತಿ ನಿಲಯದ ಟೆಂಡರ್ ಪಡೆದಿರುವ ಶಶಾಂಕ್ ವಿರುದ್ಧ ಪೊಲೀಸರು ಮಾರ್ಚ್ 1ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಅಂಕಪಟ್ಟಿ ಪೂರೈಸಲು ಟೆಂಡರ್ ಪಡೆದಿದ್ದ ಎಲಿಮೆಂಟರಿ 42 ಏಜೆನ್ಸಿ ಟೆಂಡರ್ ಅವಧಿ ಮುಗಿದಿದ್ದರಿಂದ ಸಿಂಡಿಕೇಟ್ ಸಭೆಯಲ್ಲಿ ಬೇರೆ ಸಂಸ್ಥೆಗೆ ಟೆಂಡರ್ ನೀಡಲು ಅಂದಿನ ಪ್ರಭಾರ ಕುಲಪತಿ ಪ್ರೊ. ಕೆ. ವಿಜಯಕುಮಾರ ನಿರ್ಧರಿಸಿದರು. ನಂತರ ಯಾತನೂರ ಅವರು ಪ್ರಭಾರ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ವಿಶೇಷ ಅಧಿಕಾರ ಬಳಸಿಕೊಂಡು ಬೇರೊಂದು ಸಂಸ್ಥೆಗೆ ಟೆಂಡರ್ ನೀಡಿರುವುದನ್ನು ರದ್ದು ಮಾಡಿ, ಮೊದಲಿನ ಸಂಸ್ಥೆಯನ್ನೇ ಮುಂದುವರೆಸುವ ಮೂಲಕ ಅವ್ಯವಹಾರ ನಡೆಸಲಾಗಿದೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
‘ಶಶಾಂಕ್ ಎಂಬುವರು ಪ್ರಭಾರ ಕುಲಪತಿಗೆ ಹಣ ನೀಡಿ, ಮಹಿಳಾ ವಸತಿ ನಿಲಯದ ನಿರ್ವಹಣೆ ಗುತ್ತಿಗೆ ಪಡೆದಿದ್ದು, ಅವರು ತಡರಾತ್ರಿಯವರೆಗೂ ವಸತಿ ನಿಲಯದಲ್ಲೇ ಇರುತ್ತಾರೆ ಎಂದು ವಿದ್ಯಾರ್ಥಿನಿಯರು ದೂರಿದ್ದರು. ಆದರೂ ಕುಲಪತಿ ಕ್ರಮ ಕೈಗೊಂಡಿರಲಿಲ್ಲ’ ಎಂದು ಮಹೇಶಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
ವಿಶ್ವವಿದ್ಯಾಲಯ ಠಾಣೆಯ ಇನ್ಸ್ಪೆಕ್ಟರ್ ಶಿವಾನಂದ ಗಾಣಿಗೇರ ತನಿಖೆ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.