ಕಲಬುರಗಿ: ಇಂದಿರಾ ಆವಾಸ ಯೋಜನೆಯಡಿ ಮಂಜೂರಾದ ಮನೆಗಳನ್ನು ನಿರ್ಮಿಸದೆ ನಕಲಿ ಕಾಗದ ಸೃಷ್ಟಿಸಿ, ಸರ್ಕಾರವನ್ನು ವಂಚಿಸಿದ ಆರೋಪ ಸಾಬೀತು ಆಗಿದ್ದರಿಂದ ಚಿಂಚೋಳಿಯ ಜೆಎಂಎಫ್ಸಿ ನ್ಯಾಯಾಲಯವು ಅಪರಾಧಿ ಪಿಡಿಒಗೆ 1 ವರ್ಷ ಜೈಲು ಶಿಕ್ಷೆ ಹಾಗೂ ₹ 90 ಸಾವಿರ ದಂಡ ವಿಧಿಸಿದೆ.
ಚಿಂಚೋಳಿ ತಾಲ್ಲೂಕಿನ ಚೆಂಗಟಾ ಗ್ರಾಮ ಪಂಚಾಯಿತಿಗೆ 2009–10ನೇ ಸಾಲಿನಲ್ಲಿ ಇಂದಿರಾ ಆವಾಸ ಯೋಜನೆ ಅಡಿ ಮನೆಗಳು ಮಂಜೂರು ಆಗಿದ್ದವು. ಪಂಚಾಯಿತಿ ಅಧ್ಯಕ್ಷ, ಪಿಡಿಒ ಹಾಗೂ ಕೆಲವು ಸದಸ್ಯರು ಸೇರಿ ಮನೆಗಳನ್ನು ನಿರ್ಮಾಣ ಮಾಡದೆ, ಸರ್ಕಾರವನ್ನು ವಂಚಿಸಿದ್ದರು. ಈ ಬಗ್ಗೆ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್ಐ ಅಕ್ಕಮಹಾದೇವಿ ಅವರು ತನಿಖೆ ನಡೆಸಿ, ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ದತ್ತಕುಮಾರ ಅವರು, ಗ್ರಾ.ಪಂ ಅಧ್ಯಕ್ಷರಾಗಿದ್ದ ಜ್ಯೋತಿ ರಾಠೋಡ ಅವರಿಗೆ 6 ತಿಂಗಳು ಸಾದಾ ಜೈಲು ಶಿಕ್ಷೆ, ₹50,000 ದಂಡ, ಬಾಬು ಪೋಮು ಅವರಿಗೆ 6 ತಿಂಗಳ ಸಾದಾ ಜೈಲು ಶಿಕ್ಷೆ, ₹ 40,000 ದಂಡ, ಪಿಡಿಒ ಅಶೋಕ ಚನ್ನಪ್ಪ ಅವರಿಗೆ 1 ವರ್ಷ ಜೈಲು ಶಿಕ್ಷೆ, ₹ 90 ಸಾವಿರ ದಂಡ, ಪಂಚಾಯಿತಿ ಸದಸ್ಯರಾದ ಖ್ಯಾದಮ್ಮ ಶಂಕ್ರೆಪ್ಪ ಮತ್ತು ಸುವರ್ಣಾ ಅಂಬರಾಯ ಅವರಿಗೆ ತಲಾ ₹ 5,000 ದಂಡ ವಿಧಿಸಿ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕ ಶಾಂತಕುಮಾರ ಜಿ.ಪಾಟೀಲ ವಾದ ಮಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.