ಕಾಳಗಿ: ತಾಲ್ಲೂಕಿನ ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನ ಪಕ್ಕದಲ್ಲಿರುವ ಕೇಂದ್ರ ಸರ್ಕಾರದ ಪಿಎಂಶ್ರೀ ಸ್ಕೂಲ್, ಜವಾಹರ ನವೋದಯ ವಿದ್ಯಾಲಯಕ್ಕೆ ಸೋಮವಾರ ವೈದ್ಯರ ತಂಡ ಭೇಟಿ, ಮಕ್ಕಳ ಆರೋಗ್ಯ ತಪಾಸನೆ ನಡೆಸಿತು.
ಕೆಲದಿನಗಳಿಂದ ಇಲ್ಲಿನ ಮಕ್ಕಳಲ್ಲಿ ಅನಾರೋಗ್ಯ ಕಾಡುತ್ತಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ವೈದ್ಯರ ತಂಡ ಧಾವಿಸಿ, ವಿದ್ಯಾಲಯದ 400ಕ್ಕೂ ಹೆಚ್ಚು ಮಕ್ಕಳನ್ನು ತಪಾಸಣೆಗೆ ಒಳಪಡಿಸಿತು.
ಗುಂಡಗುರ್ತಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ಕೋರವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯು, ಎಲ್ಲ ಮಕ್ಕಳನ್ನು ಸರತಿ ಸಾಲಿನಲ್ಲಿ ಕರೆದು ಕಣ್ಣು, ಕಿವಿ, ನಾಲಿಗೆ, ಹಲ್ಲು, ಹೃದಯ ಪರೀಕ್ಷಿಸಿದರು. ‘ಸದ್ಯ ಒಂಬತ್ತು ಮಕ್ಕಳಲ್ಲಿ ಜ್ವರ ಕಂಡುಬಂದಿದೆ. ಅವರ ರಕ್ತ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ. ಜ್ವರಪೀಡಿತ ಮಕ್ಕಳಿಗೆ ಮಾತ್ರೆ ಕೊಟ್ಟು ಪ್ರಥಮ ಚಿಕಿತ್ಸೆ ನೀಡಲಾಗಿದೆ. ಒಂದು ವಾರದವರೆಗೆ ವಿದ್ಯಾಲಯದಲ್ಲಿ ಪ್ರತಿನಿತ್ಯ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುವುದು. ಬಳಿಕ ವಾಂತಿ–ಭೇದಿ, ಜ್ವರ ಇತರ ಅನಾರೋಗ್ಯ ತೊಂದರೆ ಕಂಡುಬಂದರೆ ಕೂಡಲೇ ನಮ್ಮ ಗಮನಕ್ಕೆ ತರಬೇಕು. ಸ್ವಚ್ಛತೆ, ಬಿಸಿ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಶುಶ್ರೂಷಕಿಯರು, ತಪ್ಪದೇ ಪ್ರತಿ 15 ದಿನಕ್ಕೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ವರದಿಯನ್ನು ನಮಗೆ ಸಲ್ಲಿಸಬೇಕು’ ಎಂದು ಪ್ರಾಚಾರ್ಯರಿಗೆ ತಿಳಿಸಲಾಗಿದ ಎಂದು ಕೋರವಾರ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಹ್ಮದ ಇರ್ಫಾನ್ ಇನಾಮದಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಹಿರಿಯ ವೈದ್ಯಾಧಿಕಾರಿ ಡಾ.ವಿದ್ಯಾಸಾಗರ, ಡಾ.ಯೂನುಸ್, ಡಾ.ಫಾತಿಮಾ, ಸಿಬ್ಬಂದಿಯಾದ ದಿಲೀಪ್, ಮಲ್ಲಿಕಾರ್ಜುನ, ಅಭಿಲಾಷ, ರೇಣುಕಾ, ಮಾರುತಿ ಪೂಜಾರಿ, ಸುಭಾಷ ಗುಬ್ಬಿ ಅನೇಕರು ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.