ಗಂಗಾವತಿ: ‘ದೇಶದ ಆಸ್ತಿಯಾದ ಯುವ ಜನಾಂಗ ಡ್ರಗ್ಸ್, ಗಾಂಜಾ, ಗುಟ್ಕಾ, ಮದ್ಯ ಸೇವನೆಗಳಂತ ದುಶ್ಚಟಗಳಿಂದ ದಾಸರಾಗದೇ, ಉನ್ನತ ಶಿಕ್ಷಣ ಪಡೆದು, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದಯ ಸರ್ಕಾರಿ ಉಪವಿಭಾಗ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಈಶ್ವರ ಸವಡಿ ಹೇಳಿದರು.
ನಗರದ ಕೊಪ್ಪಳ ರಸ್ತೆಯಲ್ಲಿನ ಖಾಸಗಿ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯಿಂದ ಗುರುವಾರ ನಡೆದ ಮಾದಕ ವಸ್ತುಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯುವಜನತೆ ಈಚೆಗೆ ಪಾರ್ಟಿ ಕಲ್ಚರ್, ಆಡಂಬರದ ಜೀವನ, ಶೋಕಿ ಜೊತೆಗೆ ರೀಲ್ಸ್ ಹುಚ್ಚುಗಳಿಗೆ ದಾಸರಾಗಿ, ದುಶ್ವಟಗಳಿಂದ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳು ತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಯಿಂದ ನರ ದೌರ್ಬಲ್ಯ, ಕಿಡ್ನಿ, ಲಿವರ್ ಸಮಸ್ಯೆ, ಕ್ಯಾನ್ಸರ್ ಸೇರಿ ದೀರ್ಘಕಾಲದ ರೋಗಗಳಿಗೆ ತುತ್ತಾಗುವ ಸಾಧ್ಯತೆಯಿದೆ. ಯುವಕರು ಜೀವನ ಮತ್ತು ಬದುಕಿನ ಶೈಲಿ ಬದಲಾಯಿಸಿಕೊಳ್ಳಬೇಕು’ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ ಕುಮಾರ ಮಾತನಾಡಿ,‘ವಿದ್ಯಾರ್ಥಿಗಳ ಜೀವನ ಅಮೂಲ್ಯವಾದದ್ದು, ಪಾಲಕರು ನಿಮಗೆಲ್ಲ ಜನ್ಮನೀಡಿ, ಕಷ್ಟಪಟ್ಟು ವಿದ್ಯೆ ಕೊಡಿಸಲು ಶಾಲಾ-ಕಾಲೇಜುಗಳಿಗೆ ಕಳುಹಿಸಿರುತ್ತಾರೆ. ಸಮಯ ವ್ಯರ್ಥ ಮಾಡದೇ, ವಿದ್ಯೆಯತ್ತ ಚಿತ್ತರಿಸಬೇಕು’ ಎಂದರು.
ಡಿವೈಎಸ್ಪಿ ಸಿದ್ಧಲಿಂಗಪ್ಪಗೌಡ ಪಾಟೀಲ, ನಗರಠಾಣೆ ಪಿಐ ಪ್ರಕಾಶಮಾಳಿ, ನಗರಠಾಣೆ ಎಸ್ಐ ವೀರೇಶ್, ಶಿವಶರಣ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.