ಕಲಬುರಗಿ: ನಗರದ ಚಿನ್ನಾಭರಣ ತಯಾರಿಸುವ ಅಂಗಡಿಯಲ್ಲಿ ಜುಲೈ 11ರಂದು ನಡೆದಿದ್ದ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅರ್ಬಾಜ್ ಶೇಖ್ (22) ಹಾಗೂ ಮಹ್ಮದ್ ಸಾಜೀದ್ (25) ಬಂಧಿತರು. ಬಂಧಿತರಿಂದ ದರೋಡೆ ಕೃತ್ಯಕ್ಕೆ ಬಳಸಿದ್ದ ಒಂದು ಲೈಟರ್ ಪಿಸ್ತೂಲ್, ಒಂದು ಮಚ್ಚು ಹಾಗೂ ಕದ್ದಿದ್ದ ಬಂಗಾರ ಮಾರಾಟ ಮಾಡಿದ ₹35 ಸಾವಿರ ನಗದನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಬುರಗಿ ದಕ್ಷಿಣ ವಿಭಾಗದ ಎಸಿಪಿ ಶರಣಪ್ಪ ಸುಬೇದಾರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಅರುಣಕುಮಾರ, ಹೆಡ್ಕಾನ್ಸ್ಟೆಬಲ್ ವೈಜನಾಥ, ಕಾನ್ಸ್ಟೆಬಲ್ ನೀಲಕಂಠ ಅವರಿದ್ದ ತಂಡವು ಮಹಾರಾಷ್ಟ್ರದ ಮಾನಖುರ್ದ್ ಪ್ರದೇಶದಿಂದ ಇಬ್ಬರೂ ಆರೋಪಿಗಳನ್ನು ಬಂಧಿಸಿದೆ.
‘ಆರೋಪಿ ಅರ್ಬಾಜ್ ವಿರುದ್ಧ ಎರಡು ಮೊಬೈಲ್ ಕಳವು ಪ್ರಕರಣಗಳಿವೆ. ಆರೋಪಿ ಮೊಹ್ಮದ್ ಸಾಜಿದ್ ವಿರುದ್ಧ ಎರಡು ಸಣ್ಣ ಪ್ರಕರಣಗಳಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಲಿಕ್ ಜ್ಯುವೆಲರ್ಸ್ ಅಂಗಡಿಗೆ ಜುಲೈ 11ರಂದು ಮಧ್ಯಾಹ್ನದ ಹೊತ್ತಿನಲ್ಲಿ ನುಗ್ಗಿದ್ದ ಆರೋಪಿಗಳು ಹರಿತವಾದ ಆಯುಧ ಹಾಗೂ ಆಟಿಕೆ ಪಿಸ್ತೂಲ್ ತೋರಿಸಿ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣದ ತನಿಖೆಗೆ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಐದು ತಂಡಗಳನ್ನು ರಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.