ಕಲಬುರ್ಗಿ: ಮೈಸೂರು ಸಂಸ್ಥಾನ ಹಾಗೂ ಮುಂಬೈ ಕರ್ನಾಟಕಕ್ಕಿಂತ ಆರು ಜಿಲ್ಲೆಗಳನ್ನು ಒಳಗೊಂಡ ಹೈದರಾಬಾದ್ ಕರ್ನಾಟಕ ಭಾಗವು ಸಾಂಸ್ಕೃತಿಕವಾಗಿ ಹೆಚ್ಚು ಶ್ರೀಮಂತವಾದುದು ಎಂದು ಹೈ–ಕ ವಿಮೋಚನಾ ಹೋರಾಟಗಾರ ಲಕ್ಷ್ಮಣ ದಸ್ತಿ ಪ್ರತಿಪಾದಿಸಿದರು.
ಕರ್ನಾಟಕ ಸಂಘಟನಾ ವೇದಿಕೆಯು ನಗರದಲ್ಲಿ ಸೋಮವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಜಗತ್ತಿಗೇ ಮೊಟ್ಟ ಮೊದಲ ಬಾರಿಗೆ ಸಂಸತ್ತಿನ ಪರಿಕಲ್ಪನೆಯನ್ನು ಬಸವಣ್ಣನವರು 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ನೀಡಿದರು. ಕಾರ್ಲ್ಮಾರ್ಕ್ಸ್ ಹೇಳಿರುವ ಸಮಾನತೆಯ, ಸಮಾಜವಾದದ ಪರಿಕಲ್ಪನೆ ಬಸವಣ್ಣನವರ ಕಾಲದಲ್ಲಿಯೇ ಇತ್ತು. ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಇದೆ. ಅನುಭವ ಮಂಟಪದಲ್ಲಿ ಶೇ 50ರಷ್ಟು ಮಹಿಳೆಯರೇ ಇರುತ್ತಿದ್ದರು’ ಎಂದರು.
ಮಿತಾಕ್ಷರದಂತಹ ಅಪೂರ್ವ ಗ್ರಂಥ ಬರೆದವಿಜ್ಞಾನೇಶ್ವರ, ಕವಿರಾಜಮಾರ್ಗಕಾರ, ಸೂಫಿ ತತ್ವದ ಬಗ್ಗೆ ವಿಸ್ತೃತ ಗ್ರಂಥ ಬರೆದ ಸೂಫಿ ಸಂತ ಬಂದಾನವಾಜ ಇಲ್ಲಿಯವರು. ರಾಷ್ಟ್ರಕೂಟರ ರಾಜಧಾನಿ ಮಳಖೇಡವಾಗಿತ್ತು. ಕಲ್ಯಾಣಿ ಚಾಲುಕ್ಯರು, ಕಲಚೂರಿಗಳು, ಮೊಗಲರು, ಬಹಮನಿಗಳು ಹಾಗೂ ನಿಜಾಮರು ಈ ಭಾಗವನ್ನು ಆಳಿದ್ದಾರೆ. ಮಳಖೇಡ ಹಾಗೂ ಬಸವ ಕಲ್ಯಾಣಗಳು ರಾಜಧಾನಿಯಾಗಿದ್ದವು’ ಎಂದು ಹೇಳಿದರು.
‘ನಿಜಾಮರಿಂದ ವಿಮೋಚನೆ ದೊರೆತ ಬಳಿಕ ಈ ಭಾಗ ಸಮಗ್ರ ಅಭಿವೃದ್ಧಿಯಾಗಬೇಕಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಎಲ್ಲ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿವೆ. 1998ರಲ್ಲಿ ಎಲ್.ಕೆ.ಅಡ್ವಾಣಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದ ಕಲಬುರ್ಗಿ–ಬೀದರ್ ಮಧ್ಯದ ರೈಲು ಮಾರ್ಗವನ್ನು 20 ವರ್ಷಗಳ ಬಳಿಕ ನರೇಂದ್ರ ಮೋದಿ ಅವರು ಉದ್ಘಾಟಿಸುತ್ತಾರೆಂದರೆ ಏನರ್ಥ? ಇಷ್ಟೊಂದು ಅತ್ಯಾಧುನಿಕ ತಂತ್ರಜ್ಞಾನ ಇದ್ದಾಗಲೂ ಇಷ್ಟೊಂದು ವಿಳಂಬವೇಕೆ’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.