ಕಲಬುರಗಿ: ‘ಹನುಮಂತನು ಶ್ರೀರಾಮನ ನಿಷ್ಠಾವಂತ ಭಕ್ತ. ರಾಮನ ಸೇವೆಯಲ್ಲಿ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿದ ಹನುಮಂತನು, ಧರ್ಮ, ಕರ್ಮ, ಭಕ್ತಿಗೆ ಶ್ರೇಷ್ಠ ಮಾದರಿ. ಭಾರತದ ಧಾರ್ಮಿಕ ಸಂಸ್ಕೃತಿಯಲ್ಲಿ ಹನುಮಂತ ಗೌರವದ ಸ್ಥಾನಮಾನ ಹೊಂದಿದ್ದಾನೆ. ಹನುಮಂತನ ಶಕ್ತಿ, ಭಕ್ತಿ, ಬುದ್ಧಿಮತ್ತೆ ಹಾಗೂ ಮಹಿಮೆಯು ಜನಮಾನಸದಲ್ಲಿ ಇಂದಿಗೂ ಪ್ರಭಾವ ಬೀರುತ್ತದೆ’ ಎಂದು ಪಂ.ಪ್ರಸನ್ನಾಚಾರ್ಯ ಜೋಶಿ ಹೇಳಿದರು.
ಹನುಮ ಜಯಂತಿ ಅಂಗವಾಗಿ ಇಲ್ಲಿನ ಕರುಣೇಶ್ವರ ನಗರದ ಜೈ ವೀರ ಹನುಮಾನ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹನುಮಂತ ದೇವರ ಮಹಿಮೆ ಪ್ರವಚನದ ಮಂಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹನುಮಂತ ದೇವರ ಉಪಾಸನೆಯು ಭಕ್ತಿಗೆ ಶಕ್ತಿ, ಶಕ್ತಿಗೆ ಧೈರ್ಯ ಮತ್ತು ಧೈರ್ಯಕ್ಕೆ ವಿಜಯವನ್ನು ತರುತ್ತದೆ’ ಎಂದರು.
ಅಂಗವಾಗಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಹನುಮಂತನಿಗೆ ಯಂತ್ರೋಧಾರಕ ಆಂಜನೇಯನ ವಿಶೇಷ ಅಲಂಕಾರ ಮಾಡಲಾಗಿತ್ತು. ಎಲೆ ಪೂಜೆ, ತೊಟ್ಟಿಲೋತ್ಸವವೂ ನಡೆಯಿತು. ನಂತರ ಲಕ್ಷ್ಮೀನಾರಾಯಣ, ಹಂಸನಾಮಕ ಮತ್ತು ಹರೇ ಶ್ರೀರಾಮ, ಜೈವೀರ ಹನುಮಾನ ಪಾರಾಯಣ ಸಂಘ ಸಂಘಗಳಿಂದ ಸುಂದರಕಾಂಡ ವಾಯುಸ್ತುತಿ ಪುನಸ್ಚರಣ ಮಾಡಲಾಯಿತು.
ಪವಮಾನ ಹೋಮ, ರಥಾಂಗ ಹೋಮ, ಭಜನೆ ಪಲ್ಲಕ್ಕಿ ಉತ್ಸವ ಹಾಗೂ ರಥಾಂಗ ಹೋಮ ನೂರಾರು ಭಕ್ತರ ಜಯಘೋಷಗಳ ಮಧ್ಯೆ ವಿಜೃಂಭಣೆಯಿಂದ ಜರುಗಿದವು. ಮಹಾಮಂಗಳಾರತಿ ನಂತರ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಸಹಸ್ರ ದೀಪೋತ್ಸವ ಮತ್ತು ಬಡಾವಣೆಯ ಹಿರಿಯ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ದೇವಸ್ಥಾನದ ಅಧ್ಯಕ್ಷ ಕಿಶನರಾವ್ ಮಟಮಾರಿ, ಅವಿನಾಶ ಕುಲಕರ್ಣಿ ರೇವೂರ, ಶೇಷಗಿರಿರಾವ್ ಕುಲಕರ್ಣಿ, ವಿಶ್ವಾಸ ಮೊಘೇಕರ್, ವಿನುತ ಎಸ್. ಜೋಶಿ, ಋಷಿಕೇಶ್ ಚೌಡಾಪುರ, ಡಾ.ಸುಧೀರ ಕುಳಗೇರಿ, ಗಿರೀಶ ಕುಲಕರ್ಣಿ,ನಿತೀಶ ಜೋಶಿ, ಡಾ.ಶ್ರೀನಿವಾಸ್ ಜಹಾಗೀರದಾರ, ಶಾಮಾಚಾರ್ಯ ವಿ ಜೋಶಿ, ಅನಿಲ್ ಕುಲಕರ್ಣಿ, ಸಂಜು ಬಿರಾದಾರ, ರಾಮಾಚಾರ್ಯ ನಗನೂರು, ನರಸಿಂಗರಾವ್ ಕುಲಕರ್ಣಿ, ಸುರೇಶ ಕುಲಕರ್ಣಿ, ಭೀಮರಾವ ಸುಬೇದಾರ, ಆರ್.ಕೆ. ಕುಲಕರ್ಣಿ, ರಾಮಚಂದ್ರ ಸೂಗೂರು, ಶ್ರೀ ಜೈ ವೀರ ಹನುಮಾನ್ ಭಜನಾ ಮಂಡಳಿಯ ಮಂಡಳಿಯ ಹೇಮಾ ಚೌಡಾಪೂರಕರ್, ಸವಿತಾ ಕುಲಕರ್ಣಿ, ಗಿರಿಜಾ ಸಿಂದಗಿಕರ, ಸುನಂದಾ ಎಸ್.ಜೋಶಿ, ಮಾಲಿನಿ ಮಟಮಾರಿ, ಅನುರಾಧಾ ಜೋಶಿ ಇದ್ದರು.
ಹನುಮ ಜಯಂತಿ ಅಂಗವಾಗಿ ಶುಕ್ರವಾರ ರಾಯಚೂರಿನ ಪ್ರಸಿದ್ಧ ದಾಸಪದ ಗಾಯಕ ಶೇಷಗಿರಿ ದಾಸ ಅವರಿಂದ ‘ಹನುಮಾನ ಕೀ ಜೈ’ ದಾಸವಾಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.