ಕಲಬುರ್ಗಿ: ಸೊಲ್ಲಾಪುರ–ಕಲಬುರ್ಗಿ ಮಾರ್ಗದಲ್ಲಿ ಜೋಡಿ ಮಾರ್ಗ ಕಾಮಗಾರಿ ನಡೆಯುತ್ತಿರುವುದರಿಂದ ಇದೇ 17ರಿಂದ 26ರವರೆಗೆ ರದ್ದುಗೊಳಿಸಲು ನಿರ್ಧರಿಸಿದ್ದ ಹಾಸನ–ಎಕ್ಸ್ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ಹಾಸನ–ಕಲಬುರ್ಗಿ ಮಧ್ಯೆ ಓಡಿಸಲು ಮಧ್ಯ ರೈಲ್ವೆ ನಿರ್ಧರಿಸಿದೆ ಎಂದು ಹೈ–ಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.
ಈ ರೈಲನ್ನು 10 ದಿನಗಳವರೆಗೆ ರದ್ದುಗೊಳಿಸುವುದರಿಂದ ಇಲಾಖೆಗೆ ಹಾಗೂ ಪ್ರಯಾಣಿಕರು ಸಾಕಷ್ಟು ಆರ್ಥಿಕ ನಷ್ಟ ಆಗಲಿದೆ ಎಂಬ ಅಂಶವನ್ನು ಮಧ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಶೈಲೇಶ್ ಗುಪ್ತಾ ಅವರಿಗೆ ಸೊಲ್ಲಾಪುರದ ಅವರ ಕಚೇರಿಯಲ್ಲಿ ಗುರುವಾರ ಭೇಟಿಯಾಗಿ ಮನವರಿಕೆ ಮಾಡಲಾಯಿತು. ಮನವಿಗೆ ತಕ್ಷಣವೇ ಸ್ಪಂದಿಸಿದ ಗುಪ್ತಾ ಅವರು ಈ ಸಂಬಂಧ ಶೀಘ್ರವೇ ಪರಿಷ್ಕೃತ ಆದೇಶ ಹೊರಡಿಸಿ ವೇಳಾಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದರು ಎಂದರು.
ಮುಂದಿನ ದಿನಗಳಲ್ಲಿ ಕಲಬುರ್ಗಿಯಿಂದ ಹೊಸ ರೈಲು ಆರಂಭಿಸಲು ಕ್ರಮ ಕೈಗೊಳ್ಳವ ಬಗ್ಗೆಯೂ ಭರವಸೆ ನೀಡಿದ್ದಾರೆ ಎಂದು ದಸ್ತಿ ತಿಳಿಸಿದರು. ಈ ಸಂದರ್ಭದಲ್ಲಿ ಸಮಿತಿ ಮಹಾ ಪ್ರಧಾನ ಕಾರ್ಯದರ್ಶಿ ಮನೀಷ ಜಾಜು ಇದ್ದರು.
ಸೇಡಂ ಅವರಿಂದಲೂ ಪತ್ರ: ಕಲಬುರ್ಗಿ ವಿಭಾಗೀಯ ರೈಲ್ವೆ ಹೋರಾಟ ಸಮಿತಿ ಸಂಚಾಲಕ ಸುನೀಲ ಕುಲಕರ್ಣಿ ಅವರ ಮನವಿ ಮೇರೆಗೆ ರಾಜ್ಯಸಭೆ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಅವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಗುರುವಾರವೇ ಪತ್ರ ಬರೆದರು. ಅದರ ಒಂದು ಪ್ರತಿಯನ್ನೂ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಸಲ್ಲಿಸಲಾಗಿದೆ. ರೈಲನ್ನು ತಾತ್ಕಾಲಿಕವಾಗಿ ಕಲಬುರ್ಗಿಯಿಂದ ಹಾಸನದವರೆಗೆ ಓಡಿಸಲು ಅಂಗಡಿ ಅವರಿಗೂ ದೂರವಾಣಿ ಕರೆ ಮೂಲಕ ಮನವಿ ಮಾಡಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.