ಕಲಬುರಗಿ: ‘ಇಷ್ಠಲಿಂಗ ಪೂಜೆ ಶ್ರೇಷ್ಠವಾದ ಮಹಾ ವ್ರತ’ ಎಂದು ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ನಗರದ ಸೊಗಸನಕೇರಿಯ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ‘ಸಿದ್ಧಾಂತ ಶಿಖಾಮಣಿ’ ಪ್ರವಚನದ ಸಮನ್ವಯಾತ್ಮಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ದೇಶದ ಧಾರ್ಮಿಕ ಪರಂಪರೆಯಲ್ಲಿ ಅನೇಕ ವ್ರತಗಳಿವೆ. ಅವುಗಳು ನೈಮಿತ್ತಿಕ ವ್ರತಗಳಾಗಿವೆ. ಆದರೆ, ಇಷ್ಠಲಿಂಗ ಪೂಜೆ ಮಾತ್ರ ನಿತ್ಯ ವ್ರತವಾಗಿದೆ. ನಮ್ಮ ದೇಹದಲ್ಲಿರುವ ಎಲ್ಲ ಅವಯವಗಳಲ್ಲಿ ಶಿರಸ್ಸು ಹೇಗೆ ಶ್ರೇಷ್ಠವೊ ಅದರಂತೆ ಎಲ್ಲಾ ವ್ರತಗಳಲ್ಲಿ ಇದು ಶ್ರೇಷ್ಠ’ ಎಂದರು.
‘ಸರ್ವರಿಗೂ ಸಮಾನ ಹಕ್ಕನ್ನು ಕೊಟ್ಟ ಈ ಲಿಂಗಪೂಜಾ ಮಹಾವ್ರತ ಒಂದೇ ಜನ್ಮದಲ್ಲಿ ಮುಕ್ತಿಯನ್ನು ಸಹ ಕೊಡುವಂತದ್ದಾಗಿದೆ ಎಂಬ ವಿಚಾರವನ್ನು ಆಗಮಗಳಲ್ಲಿ ಶಿವನೇ ಪಾರ್ವತಿಗೆ ಬೋಧಿಸಿದ್ದಾನೆ. ಹೀಗೆ ಪಂಚಾಚಾರ್ಯರು ಜಗತ್ತಿನ ಸಮಸ್ತ ಮಾನವರ ಕಲ್ಯಾಣಕ್ಕಾಗಿ ಇಷ್ಠಲಿಂಗ ಪೂಜಾ ವ್ರತ ಬೋಧಿಸಿದ್ದರಿಂದ ಇದರ ಪ್ರಯೋಜನವನ್ನು ಸರ್ವರೂ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ಗುರುಸಿದ್ದ ಮಣಿಕಂಠ ಶಿವಾಚಾರ್ಯರು, ಧೈವಾಡಕರ್ ಬಾರ್ಷಿ ಮಹಾರಾಜರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಡಗಂಚಿಯ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಪಾಳಾದ ಗುರುಮೂರ್ತಿ ಶಿವಾಚಾರ್ಯರು, ಕಡಗಂಚಿ ಹಾಗೂ ಸುಲೇಪೇಟದ ಶ್ರೀಗಳು, ಚಂದನಕೇರಾ ಸ್ವಾಮೀಜಿ, ಸಿದ್ದಾನಂದ ಶಿವಯೋಗಿಗಳು ಇದ್ದರು.
ನಾಗರಾಜ ಗೋಗಿ, ನಂದಮ್ಮ, ದುಂಡಪ್ಪ ಬಿರಾದಾರ, ಅಣ್ಣಾರಾವ ಬೆಣ್ಣೂರ, ವೀರಣ್ಣ ಹೊನ್ನಶೆಟ್ಟಿ, ಮಹಾದೇವಪ್ಪ ಆಲಗೂಡಕರ, ಪದ್ಮಾಜಿ ಗುಂಡೇರಾವ ಭಾಗವಹಿಸಿದ್ದರು. ಸಿದ್ರಾಮಯ್ಯಸ್ವಾಮಿ ಹಿರೇಮಠ ಸ್ವಾಗತಿಸಿದರು. ಶಿವಯ್ಯ ಮಠಪತಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.