ಚಿತ್ತಾಪುರ: ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ವಾರ್ಡ್ ವಾರು ಸಮಸ್ಯೆ, ತೊಂದರೆ ಆಲಿಸಲು ಮತ್ತು ಪರಿಹಾರ ಮಾಡಲೆಂದು ಪುರಸಭೆಯಿಂದ ಸೋಮವಾರ ಆಯೋಜಿಸಿದ್ದ ಜನಸ್ಪಂದನಾ ಸಭೆಯಲ್ಲಿ ಒಟ್ಟು 53 ಅರ್ಜಿಗಳು ಸಲ್ಲಿಕೆಯಾಗಿವೆ.
ಸಾರ್ವಜನಿಕರ ಸಮಸ್ಯೆ, ಕುಂದುಕೊರತೆ ಆಲಿಸಲು ಕಳ್ಳಿ ಬಸವಣ್ಣ ಮಂದಿರದಲ್ಲಿ ಗ್ರೇಡ್-2 ತಹಶೀಲ್ದಾರ್ ರಾಜಕುಮಾರ ಮರತೂರಕರ ಅವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂಧನಾ ಸಭೆಯಲ್ಲಿ ಪುರಸಭೆ ಮತ್ತು ಕಂದಾಯ ಇಲಾಖೆಯ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಯಿತು. ಕಂದಾಯ ಇಲಾಖೆಗೆ ವೃದ್ಧಾಪ್ಯ ವೇತನ, ವಿಧವಾ ವೇತನ ಕುರಿತು ಅರ್ಜಿ ಬಂದಿವೆ. ಜೆಸ್ಕಾಂ ಇಲಾಖೆ ಸಂಬಂಧಿತವಾಗಿ ವಿದ್ಯುತ್ ಪರಿವರ್ತಕ ಸ್ಥಳಾಂತರ ಮತ್ತು ಜೋತು ಬಿದ್ದು ವಿದ್ಯುತ್ ತಂತಿ ಸರಿಪಡಿಸಲು ಅರ್ಜಿ ಬಂದಿವೆ. ಗೃಹಭಾಗ್ಯ ಯೋಜನೆ ಕುರಿತು ಸಿಡಿಪಿಒ ಇಲಾಖೆಗೆ ಅರ್ಜಿ ಸಲ್ಲಿಕೆಯಾಗಿವೆ. ಎಲ್ಲ ಅರ್ಜಿಗಳನ್ನು ಸಂಬಂಧಿತ ಇಲಾಖೆಗೆ ಕಳಿಸಿ ಸಮಸ್ಯೆ ಪರಿಹರಿಸಲು ಕ್ರಮ ಜರುಗಿಸುವಂತೆ ಸೂಚಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಹೇಳಿದರು.
ವಿದ್ಯುತ್ ಪರಿವರ್ತಕ ಸ್ಥಳಾಂತರ ಕುರಿತು ಸಾರ್ವಜನಿಕರ ಬೇಡಿಕೆಯಂತೆ ಸಭೆಯ ನಂತರ ಜೆಸ್ಕಾಂ ಎಂಜಿನಿಯರ್ ಜೊತೆಗೆ ಸ್ಥಳ ಪರಿಶೀಲನೆ ಮಾಡಲಾಗಿದೆ. ಮನೆ ಸೌಲಭ್ಯ ನೀಡುವಂತೆ ಪುರಸಭೆಗೆ ಅರ್ಜಿಗಳು ಸಲ್ಲಿಕೆಯಾಗಿವೆ. ಬರುವ ದಿನಗಳಲ್ಲಿ ಆದ್ಯತೆಯ ಮೇರೆಗೆ ಸೌಲಭ್ಯ ನೀಡಲು ಹಾಗೂ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು. ಸಭೆಯಲ್ಲಿ ಪುರಸಭೆ ಸದಸ್ಯರಾದ ರಮೇಶ ಬಮ್ಮನಳ್ಳಿ, ಪ್ರಭು ಗಂಗಾಣಿ ಅವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.