ಜೇವರ್ಗಿ: ಭೀಮಾನದಿಯ ಪ್ರವಾಹ ಕಡಿಮೆಯಾದರೂ ತಾಲ್ಲೂಕಿನ ಕಟ್ಟಿಸಂಗಾವಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಚಾರಕ್ಕೆ ಮುಕ್ತವಾಗಿಲ್ಲ. ಹೀಗಾಗಿ ಕಳೆದ 15 ದಿನಗಳಿಂದ ಗ್ರಾಮಸ್ಥರು ಪರದಾಡುವಂತಾಗಿದೆ.
ಭೀಮಾನದಿಯ ಪ್ರವಾಹದ ನೀರು ಒತ್ತು ಬಂದಿದ್ದರಿಂದ ಕಳೆದ 15 ದಿನಗಳ ಹಿಂದೆ ಕಟ್ಟಿಸಂಗಾವಿ ಗ್ರಾಮದಲ್ಲಿರುವ ಹಳ್ಳದ ಸೇತುವೆ ಜಲಾವೃತಗೊಂಡಿದೆ. ಹೀಗಾಗಿ ಕಟ್ಟಿಸಂಗಾವಿ ಯಿಂದ 5 ಕಿ.ಮೀ ದೂರವಿರುವ ಜೇವರ್ಗಿ ಪಟ್ಟಣಕ್ಕೆ ಗ್ರಾಮಸ್ಥರು 20 ಕಿ.ಮೀ ಸುತ್ತು ಹಾಕಿ ಹೋಗಬೇಕಾಗಿದೆ.
ಪ್ರಾರಂಭದಲ್ಲಿ ಗ್ರಾಮಸ್ಥರ ಮನವಿಗೆ ತಾಲ್ಲೂಕಾಡಳಿತ ಎರಡು ದಿನ ಮಾತ್ರ ಬೋಟ್ ವ್ಯವಸ್ಥೆ ಕಲ್ಪಿಸಿತು. ನಂತರ ಸ್ಥಗಿತಗೊಳಿಸಿ ಬೋಟ್ ಬೇರೆ ಗ್ರಾಮಕ್ಕೆ ಸ್ಥಳಾಂತರ ಮಾಡಲಾಯಿತು. ಇದರಿಂದ ಗ್ರಾಮಸ್ಥರು ಮದರಿ, ಗುಡೂರ ಗ್ರಾಮದ ಮೂಲಕ ಪಟ್ಟಣಕ್ಕೆ ಬರುತ್ತಿದ್ದಾರೆ. ಸಾರಿಗೆ ಬಸ್ ಸಂಚಾರ ಇಲ್ಲದೇ ಖಾಸಗಿ ವಾಹನಗಳಲ್ಲಿ ದುಬಾರಿ ಹಣ ನೀಡಿ ಪ್ರಯಾಣಿಸುತ್ತಿರುವ ಗ್ರಾಮಸ್ಥರು ತಾಲ್ಲೂಕಾಡಳಿತದ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ.
ನಿತ್ಯ ಶಾಲಾ–ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಅನಾರೋಗ್ಯದಿಂದ ಬಳಲುವ ರೋಗಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಮದರಿ ಹಾಗೂ ಜೇವರ್ಗಿ ಪಟ್ಟಣದ ಕಡೆ ಬರುವ ಎರಡೂ ರಸ್ತೆಗಳು ಜಲಾವೃತಗೊಂಡು ಕಟ್ಟಿಸಂಗಾವಿ ನಡುಗಡ್ಡೆಯಂತಾಗಿತ್ತು. ಈ ಸಂದರ್ಭದಲ್ಲಿ ಗ್ರಾಮಕ್ಕೆ ಸಂಬಂಧಿಸಿದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಹದಿಂದ ಗ್ರಾಮದಲ್ಲಿ ವಾತಾವರಣ ಕಲುಷಿತಗೊಂಡು ಕೆಟ್ಟ ವಾಸನೆ ಬರುತ್ತಿದೆ. ಹೀಗಾಗಿ ಸಂತ್ರಸ್ತರು ಮನೆಗಳ ಸ್ವಚ್ಛತೆಯಲ್ಲಿ ನಿರತರಾಗಿದ್ದಾರೆ. ಹಳ್ಳದ ಸೇತುವೆ ಪ್ರವಾಹದಿಂದ ಮುಕ್ತವಾಗುವವರೆಗೂ ತಾತ್ಕಾಲಿಕ ದೋಣಿ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ಗ್ರಾಮಸ್ಥ ಸಂಗಮೇಶ ಬೋರಟ್ಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.