ಲಾಡ್ಲಾಪುರ(ಕಲಬುರಗಿ): ಹೋಳಿ ಹಬ್ಬದ ಕಾಮ ದಹನ ವೇಳೆ ಬೆಂಕಿಯ ಕಿಡಿ ತೆಗೆದುಕೊಂಡು ಹೋಗುವ ಸಂಬಂಧ ಕಲಹ ಸಂಭವಿಸಿ ವ್ಯಕ್ತಿಯೊಬ್ಬನನ್ನು ತಳ್ಳಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ರವಿ ಸಾಬಣ್ಣ ಓಚರ(25) ಮೃತ ಯುವಕ.
ಗ್ರಾಮದ ಮರಗಮ್ಮನ ದೇವಸ್ಥಾನ ಆವರಣದಿಂದ ಬೆಂಕಿಯ ಕಿಡಿ ಹೊತ್ತೊಯ್ದು ವಿವಿಧೆಡೆ ಕಾಮದಹನ ನಡೆಸುವ ಸಂಪ್ರದಾಯ ಪಾಲಿಸಿಕೊಂಡು ಬರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ನೂರಾರು ಜನರು ಒಂದೆಡೆ ಸೇರಿದ್ದರು. ಬೆಂಕಿಯ ಕಿಡಿ ತೆಗೆದುಕೊಂಡು ಹೋಗುವ ವಿಚಾರವಾಗಿ ಕೆಲವರ ನಡುವೆ ಮನಸ್ತಾಪ ಉಂಟಾಗಿ ಮಾತಿಗೆ ಮಾತು ಬೆಳೆದು ಕಲಹ ಶುರುವಾಯಿತು. ಈ ವೇಳೆ ರವಿ ಎಂಬಾತನನ್ನು ಜೋರಾಗಿ ತಳ್ಳಿದ ಪರಿಣಾಮ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮೃತನ ಕುಟುಂಬಸ್ಥರು ವಾಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಘಟನೆಯಿಂದ ಗ್ರಾಮದಲ್ಲಿ ಈಗ ಬಿಗುವಿನ ವಾತಾವರಣ ಉಂಟಾಗಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.