ADVERTISEMENT

ಕಲಬುರಗಿ | ಬೆಳೆಹಾನಿ ಸಮೀಕ್ಷೆ ನಡೆಸಲು ಇನ್ನೆಷ್ಟು ದಿನ ಬೇಕು?: ಬಾಬುರಾವ ಚವ್ಹಾಣ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 3:13 IST
Last Updated 5 ಅಕ್ಟೋಬರ್ 2025, 3:13 IST
ಬಾಬುರಾವ ಚವ್ಹಾಣ
ಬಾಬುರಾವ ಚವ್ಹಾಣ   

ಕಲಬುರಗಿ: ‘ಅತಿವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ. ಮುಖ್ಯಮಂತ್ರಿಯವರ ಬೆಳೆಹಾನಿ ಪರಿಹಾರ ಘೋಷಣೆ ಹೇಳಿಕೆಗೆ ಮಾತ್ರ ಸೀಮಿತವಾಗಿದೆ. ಸಚಿವ ಪ್ರಿಯಾಂಕ್‌ ಖರ್ಗೆ ಅವರು ವಿಮಾನದ ಮೂಲಕ ಬೆಳಿಗ್ಗೆ ಬಂದು ಸಂಜೆ ಹೋಗುತ್ತಾರೆ. ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ಬೆಳೆಹಾನಿ ಸಮೀಕ್ಷೆ ನಡೆಸಲು ಇನ್ನೆಷ್ಟು ದಿನ ಬೇಕು’ ಎಂದು ಮಾಜಿ ಸಚಿವ ಬಾಬುರಾವ ಚವ್ಹಾಣ ಪ್ರಶ್ನಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಿಯಾಂಕ್‌ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುವ ಬದಲು ಜಿಲ್ಲಾಡಳಿತದಿಂದ ಮೊದಲು ತ್ವರಿತಗತಿಯಲ್ಲಿ ಸಮೀಕ್ಷೆ ಮಾಡಿಸಿ, ಆ ವರದಿಯನ್ನು ಮುಖ್ಯಮಂತ್ರಿ ಎದುರಿಟ್ಟು ಪರಿಹಾರ ಹಣ ಬಿಡುಗಡೆ ಮಾಡಿಸಲಿ. ಜೊತೆಗೆ ಕೇಂದ್ರ ಸರ್ಕಾರಕ್ಕೆ ಬೆಳೆ ನಷ್ಟದ ಅಂಕಿ–ಸಂಖ್ಯೆಯೊಂದಿಗೆ ಪರಿಹಾರ ಹಣಕ್ಕಾಗಿ ವಿನಂತಿ ಮಾಡಲಿ’ ಎಂದರು.

‘ಪ್ರಿಯಾಂಕ್‌ ಅವರು ಬಾಯಿ ಚಪಲಕ್ಕೆ ಮೋದಿ, ಶಾ ಅವರನ್ನು ಕತ್ತೆ ಕಾಯಲು ಆಯ್ಕೆ ಮಾಡಿದ್ದಾರಾ? ಎಂದು ಟೀಕಿಸಿದ್ದು ಸರಿಯಲ್ಲ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ಜಿಲ್ಲೆಯ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕತ್ತೆ ಕಾಯಲು ಆಯ್ಕೆ ಮಾಡಿ ದಿಲ್ಲಿಗೆ ಕಳಿಸಲಾಗಿದೆಯೇ? ಇವರು ಲೋಕಸಭೆಯಲ್ಲಿ ಬರ ಪರಿಹಾರದ ಬಗ್ಗೆ ಮಾತನಾಡಲಿ, ಧರಣಿ ಮಾಡಲಿ’ ಎಂದು ಸಲಹೆ ನೀಡಿದರು.

ADVERTISEMENT

‘ಕಲ್ಯಾಣ ಕರ್ನಾಟಕದ ರೈತರಿಗೆ ಹೆಕ್ಟೇರ್‌ಗೆ ₹30 ಸಾವಿರದಂತೆ ತಕ್ಷಣ ಬಿಡುಗಡೆ ಮಾಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರಾಜ್ಯ ಸರ್ಕಾರದಿಂದ ತಕ್ಷಣ ಪರಿಹಾರ ಕೊಡಲು ಆಗುವುದಿಲ್ಲವೆಂದರೆ ಸಚಿವರು ರಾಜೀನಾಮೆ ಕೊಡಲಿ’ ಎಂದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಇಂದಿರಾ ಶಕ್ತಿ, ವಕೀಲ ಕ್ಷತ್ರು, ರಾಜಶೇಖರ ಡೊಂಗರಗಾಂವ, ಬಾಬು ಪವಾರ, ಓನಾಥ ಚವ್ಹಾಣ, ಜಗನ್ನಾಥ ಚವ್ಹಾಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.