ADVERTISEMENT

ಕಲಬುರಗಿ | ಇ–ಖಾತಾ ವಿತರಣೆಯಲ್ಲಿ ಭ್ರಷ್ಟಾಚಾರ ಆರೋಪ: ಲೋಕಾಯುಕ್ತ ಅಧಿಕಾರಿಗಳ ದಾಳಿ

ಪಾಲಿಕೆ ಕಡತಗಳು ಖಾಸಗಿ ಕಚೇರಿಗಳಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 14:48 IST
Last Updated 15 ಸೆಪ್ಟೆಂಬರ್ 2025, 14:48 IST
<div class="paragraphs"><p>ಕಲಬುರಗಿ ಮಹಾನಗರ ಪಾಲಿಕೆಗೆ ಸೇರಿದ ಕಚೇರಿಯಲ್ಲಿ ಕಲಬುರಗಿ ಲೋಕಾಯುಕ್ತ ಎಸ್ಪಿ ಸಿ.ಸಿದ್ದರಾಜು ಅವರು ಸೋಮವಾರ ದಾಖಲೆಗಳನ್ನು ಪರಿಶೀಲಿಸಿದರು</p></div>

ಕಲಬುರಗಿ ಮಹಾನಗರ ಪಾಲಿಕೆಗೆ ಸೇರಿದ ಕಚೇರಿಯಲ್ಲಿ ಕಲಬುರಗಿ ಲೋಕಾಯುಕ್ತ ಎಸ್ಪಿ ಸಿ.ಸಿದ್ದರಾಜು ಅವರು ಸೋಮವಾರ ದಾಖಲೆಗಳನ್ನು ಪರಿಶೀಲಿಸಿದರು

   

ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಗರದ ಏಳು ಕಡೆ ಸೋಮವಾರ ದಿಢೀರ್‌ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಹಲವು ದಾಖಲೆ ಪತ್ರಗಳನ್ನು ಶೋಧ ನಡೆಸಿದರು.

ದಾಳಿಯಲ್ಲಿ ಮೂರು ಖಾಸಗಿ ಕಚೇರಿಗಳಲ್ಲಿ ಪಾಲಿಕೆಯ ಸರ್ಕಾರಿ ಕಡತಗಳು, ಪಾಲಿಕೆಯ ರೆಜಿಸ್ಟರ್‌ ಹಾಗೂ ₹8.36 ಲಕ್ಷ ನಗದು ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಸೋಮವಾರ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಕಲಬುರಗಿ, ಬೀದರ್‌ ಹಾಗೂ ಯಾದಗಿರಿ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳು ಏಳು ತಂಡಗಳಾಗಿ ಏಳು ಕಡೆಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಪ್ರತಿ ತಂಡದಲ್ಲಿ 5–6 ಮಂದಿ ಇದ್ದಾರೆ.

ಪಾಲಿಕೆಯ ವಲಯ ಕಚೇರಿ–1, ವಲಯ ಕಚೇರಿ–2, ವಲಯ ಕಚೇರಿ–3 ಹಾಗೂ ನಗರದ ಸ್ನೇಹಾ ಬಿಲ್ಡರ್ಸ್ ರಿಯಲ್ ಸ್ಟೇಟ್ ಸೆಂಟರ್, ಇನಾ ಟೆಕ್ನಿಕಲ್‌ ಕನ್ಸಲ್‌ಟೆನ್ಸಿ, ಪಾಲಿಕೆ ಕಚೇರಿ ಆವರಣದ ಜೆರಾಕ್ಸ್ ಮತ್ತು ಡಿಟಿಪಿ ಸೆಂಟರ್ ಹಾಗೂ ಎಸ್.ಬಿ. ಬಿಲ್ಡರ್ಸ್‌ ಅಂಡ್‌ ‍ಪ್ಲ್ಯಾನರ್ಸ್‌ ಕಚೇರಿಗಳ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದರು.

‘ಪಾಲಿಕೆಯಲ್ಲಿ ನಿಯಮದಂತೆ 7 ದಿನಗಳಲ್ಲಿ ಇ–ಖಾತಾ ವಿತರಿಸದೇ ವಲಯ ಕಚೇರಿಗಳಲ್ಲಿ ತಮ್ಮದೇ ಏಜೆಂಟರ ಮೂಲಕ ಅರ್ಜಿದಾರರಿಂದ ದುಡ್ಡು ಪಡೆದು, ಇ–ಖಾತಾ ವಿತರಿಸುವ ಬಗೆಗೆ ದೂರುಗಳು ಬಂದಿದ್ದವು. ದುಡ್ಡು ಕೊಡದವರಿಗೆ ಖಾತಾ ವಿತರಣೆಯಲ್ಲಿ ವಿಳಂಬ ಮಾಡಲಾಗುತ್ತಿತ್ತು. ಈ ಕುರಿತು ಉಪಲೋಕಾಯುಕ್ತರು ಸರ್ಚ್‌ ವಾರಂಟ್‌ ಜಾರಿಗೊಳಿಸಿದ್ದರು. ಅದರಂತೆ ದಾಳಿ ನಡೆಸಲಾಗಿದ್ದು, ಈಗಲೂ ಶೋಧಕಾರ್ಯ ನಡೆಯುತ್ತಿದೆ. ಪಾಲಿಕೆ ಕಚೇರಿಗಳಲ್ಲಿ ಇರಬೇಕಿದ್ದ ಇ–ಖಾತಾ ಸಂಬಂಧಿತ ಕಡತಗಳು ಖಾಸಗಿ ಕಚೇರಿಗಳಲ್ಲಿ ಪತ್ತೆಯಾಗಿವೆ. ಒಂದೆಡೆ ₹8.36 ಲಕ್ಷ ನಗದು ಸಿಕ್ಕಿದೆ. ಮತ್ತೊಂದೆಡೆ ಡಿಜಿಟಲ್‌ ವಹಿವಾಟು ವಿವರ ಲಭ್ಯವಾಗಿದ್ದು, ಇನ್ನೂ ಶೋಧ ಕಾರ್ಯ ಪ್ರಗತಿಯಲ್ಲಿದೆ’ ಎಂದು ಕಲಬುರಗಿ ಲೋಕಾಯುಕ್ತ ಎಸ್ಪಿ ಸಿ.ಸಿದ್ದರಾಜು,‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.