ಕಲಬುರ್ಗಿ: ಕಲಬುರ್ಗಿ ಮತ್ತು ಮಹಾರಾಷ್ಟ್ರದ ಲಾತೂರ ಮಧ್ಯೆನೂತನ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ರೈಲ್ವೆ ಅಧಿಕಾರಿಗಳುಸಮೀಕ್ಷೆ ನಡೆಸಲಿದ್ದಾರೆ.
ಕಲಬುರ್ಗಿ, ಬಬಲಾದ್ ರೈಲು ನಿಲ್ದಾಣ, ಆಳಂದ, ಉಮರ್ಗಾ, ನೀಲಂಗಾ, ಅನಂತವಾಲ್, ಶಿರೂರ, ಭತಂಗಳಿ ಮೂಲಕ ಲಾತೂರ ರೋಡ್ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನೂತನ ರೈಲು ಮಾರ್ಗ ನಿರ್ಮಿಸಬೇಕು ಎಂಬ ಬಹುವರ್ಷಗಳ ಬೇಡಿಕೆ ಅನ್ವಯ ಈ ಟ್ರಾಫಿಕ್ ಸಮೀಕ್ಷೆ ನಡೆಯಲಿದೆ. ಉದ್ದೇಶಿತ ಈ ಮಾರ್ಗದಒಟ್ಟಾರೆ ಉದ್ದ 187ಕಿಲೋ ಮೀಟರ್.
ಸೆಂಟ್ರಲ್ ರೈಲ್ವೆ ವಿಭಾಗದ ಅಧಿಕಾರಿಗಳ ಈ ತಂಡ, ಜಿಲ್ಲಾಧಿಕಾರಿ, ವಾಣಿಜ್ಯೋದ್ಯಮ ಸಂಸ್ಥೆ, ಎಪಿಎಂಸಿ, ಬಸ್ ಡಿಪೊ, ರೈಲ್ವೆ ನಿಲ್ದಾಣದ ಅಧಿಕಾರಿಗಳು, ಟ್ರಾನ್ಸಪೋರ್ಟ್ ಆಪರೇಟರ್ಗಳನ್ನು ಭೇಟಿಯಾಗಿ ಅವಶ್ಯ ಅಂಕಿ–ಅಂಶಗಳನ್ನು ಸಂಗ್ರಹಿಸಲಿದೆ. ಈಗಿರುವ ಟ್ರಾಫಿಕ್, ಈ ರೈಲು ಮಾರ್ಗ ಸ್ಥಾಪನೆಯಾದರೆ ಮುಂದೆ ಇರಬಹುದಾದ ಟ್ರಾಫಿಕ್ ಬಗ್ಗೆ ಅಧ್ಯಯನ ನಡೆಸಲಿದೆ.
‘ಬೀದರ್ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಆಳಂದ ತಾಲ್ಲೂಕಿನ ಜನರಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಾಲ್ಕೈದು ವರ್ಷಗಳಿಂದ ರೈಲ್ವೆ ಸಚಿವರು, ಸಚಿವಾಲಯದ ಅಧಿಕಾರಿಗಳು ಹಾಗೂ ರೈಲ್ವೆ ಮಂಡಳಿ ಮೇಲೆ ನಿರಂತರ ಒತ್ತಡ ಹೇರಿದ್ದರಿಂದ ರೈಲ್ವೆ ಅಧಿಕಾರಿಗಳ ತಂಡ ನ.24ರಿಂದ 26ರ ವರೆಗೆ ಲಾತೂರನಿಂದ ಕಲಬುರ್ಗಿ ವರೆಗೆ ಸಮೀಕ್ಷೆ ನಡೆಸಲಿದೆ’ ಎಂದು ಬೀದರ್ ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.
‘ಈ ಮಾರ್ಗದ ಸಮೀಕ್ಷೆಗೆರೈಲ್ವೆ ಸಚಿವ ಪಿಯೂಷ್ ಗೋಯಲ್ಅನುಮತಿ ನೀಡಿದ್ದು, ಮುಂಬರುವ ದಿನಗಳಲ್ಲಿ ಈ ಮಾರ್ಗಕ್ಕೆ ಒಪ್ಪಿಗೆ ದೊರೆಯಲಿದೆ’ ಎಂದು ಖೂಬಾವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.