ಕಲಬುರಗಿ: ಇಲ್ಲಿನ ಸಿಟಿ ಬಸ್ ನಿಲ್ದಾಣ ಮುಂಭಾಗದಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಕೈಯಲ್ಲಿದ್ದ ಖಡ್ಗವನ್ನು ಕಿಡಿಗೇಡಿಗಳು ಭಾನುವಾರ ವಿರೂಪಗೊಳಿಸಿದ್ದು, ಈ ಸಂಬಂಧ ಮಾನಸಿಕ ಅಸ್ವಸ್ಥನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಾಲ್ಕು ವರ್ಷಗಳ ಹಿಂದೆಯೇ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಮೂರ್ತಿಯ ಖಡ್ಗವನ್ನು ಮಾನಸಿಕ ಅಸ್ವಸ್ಥ ವಿರೂಪಗೊಳಿಸಿ ಹಾನಿ ಮಾಡಿದ್ದ. ಇದರಿಂದ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದು, ಬಿಗುವಿನ ವಾತಾವರಣ ಉಂಟಾಯಿತು.
ಮೂರ್ತಿ ಪಕ್ಕದ ಅಪ್ಪನ ಕೆರೆಯ ಬದಿಯಲ್ಲಿ ಅರೆ ಬೆತ್ತಲೆಯಾಗಿ ಓಡಾಡುತ್ತಿದ್ದ 25ರ ಆಸುಪಾಸಿನ ಮಾನಸಿಕ ಅಸ್ವಸ್ಥನನ್ನು ಬ್ರಹ್ಮಪುರ ಠಾಣೆಯ ಪೊಲೀಸರು ವಶಕ್ಕೆ ಪಡೆದರು. ಮೂರ್ತಿಯನ್ನು ಬಟ್ಟೆಯಿಂದ ಮುಚ್ಚಲಾಗಿದ್ದು, ಸ್ಥಳದಲ್ಲಿ ಪೊಲೀಸರು ನಿಯೋಜನೆ ಮಾಡಲಾಗಿದೆ.
ಟೈರ್ಗೆ ಬೆಂಕಿ ಹಚ್ಚಿ ಕುರುಬ ಸಮುದಾಯದ ಮುಖಂಡರು, ರಾಯಣ್ಣನ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಮೂರ್ತಿಯ ಸುತ್ತ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಭದ್ರತೆ ಒದಗಿಸಬೇಕು. ವಿರೂಪ ತಡೆಯುವಲ್ಲಿ ವಿಫಲವಾದ ಬೀಟ್ನಲ್ಲಿದ್ದ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.