ADVERTISEMENT

ವೈಜ್ಞಾನಿಕ ಬೇಸಾಯ ಪದ್ದತಿ ಅಳವಡಿಸಿಕೊಳ್ಳಿ: ರೈತ ಶರಣಬಸಪ್ಪ ಪಾಟೀಲ

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 13:25 IST
Last Updated 23 ಜುಲೈ 2023, 13:25 IST
ಕಮಲಾಪುರ ಸಮೀಪದ ಹಾಳ ಸುಲ್ತಾನಪುರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಾವಿನ ಹಣ್ಣು ದಿನಾಚರಣೆಯಲ್ಲಿ ಪ್ರಗತಿಪರ ರೈತ ಶರಣಬಸಪ್ಪ ಪಾಟೀಲ ಅವರನ್ನು ಸನ್ಮಾನಿಸಲಾಯಿತು
ಕಮಲಾಪುರ ಸಮೀಪದ ಹಾಳ ಸುಲ್ತಾನಪುರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಾವಿನ ಹಣ್ಣು ದಿನಾಚರಣೆಯಲ್ಲಿ ಪ್ರಗತಿಪರ ರೈತ ಶರಣಬಸಪ್ಪ ಪಾಟೀಲ ಅವರನ್ನು ಸನ್ಮಾನಿಸಲಾಯಿತು   

ಕಮಲಾಪುರ: ಹಳೆ ಮಾದರಿ ಬೇಸಾಯ ಪದ್ಧತಿಯನ್ನೇ ರೈತರು ಮುಂದುವರಿಸುತ್ತಿದ್ದು ಸಮಸ್ಯೆ ಎದುರಿಸುತ್ತಿದ್ದಾರೆ. ಹೊಸ ತಂತ್ರಜ್ಞಾನ ಆಧಾರಿತ ವೈಜ್ಞಾನಿಕ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಜಗಜೀವನರಾಮ್ ಅಭಿನವ ಕಿಸಾನ್ ಪ್ರಶಸ್ತಿ ಪುರಸ್ಕೃತ, ಪ್ರಗತಿಪರ ರೈತ ಶರಣಬಸಪ್ಪ ಪಾಟೀಲ ತಿಳಿಸಿದರು.

ಸಮೀಪದ ಹಾಳ ಸುಲ್ತಾನಪುರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮಾವಿನ ಹಣ್ಣು ದಿನಾಚರಣೆ ಹಾಗೂ ಪ್ರಗತಿಪರ ರೈತರಿಗೆ ಸತ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಧಾರಿತ ಬೀಜ ಬಿತ್ತನೆ, ಬೀಜೋಪಚಾರ, ನಿಯಮಿತವಾಗಿ ಮಣ್ಣಿನ ಪರೀಕ್ಷೆ, ಎರೆಹುಳ ಗೊಬ್ಬರದ
ಬಳಸಬೇಕು, ಕೃಷಿ ಜೊತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕು ಎಂದರು. ಹೈನುಗಾರಿಕೆ, ಕೋಳಿ, ಕುರಿ ಸಾಕಾಣಿಕೆಯಂತಹ ಸಮಗ್ರ ಮತ್ತು ವೈಜ್ಞಾನಿಕ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡರೆ ಕೃಷಿ ಲಾಭದಾಯಕವಾಗಲು ಸಾಧ್ಯವಾಗುತ್ತದೆ ಎಂದು ರೈತರಿಗೆ ಸಲಹೆ ನೀಡಿದರು.

ADVERTISEMENT

ನಿವೃತ್ತ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ ಮಾತನಾಡಿ, ‘‘ಹಣ್ಣುಗಳ ರಾಜ’ ಎಂದು ಕರೆಸಿಕೊಳ್ಳುವ ಮಾವಿಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಅಧಿಕ ಪ್ರಮಾಣದ ಜೀವಸತ್ವಗಳು, ಖನಿಜಗಳು ಮತ್ತು ರೋಗ ನಿರೋಧಕ ಶಕ್ತಿ ನೀಡುವ ಸತ್ವಗಳಿವೆ. ವಿಶೇಷವಾಗಿ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ರೈತರಿಗೆ ಮಾವಿನ ಹಣ್ಣುಗಳಿಂದ ಲಾಭ ಬರುತ್ತದೆ. ವಿವಿಧ ತಳಿಯ ಮಾವಿನಹಣ್ಣುಗಳಿದ್ದು, ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಅವುಗಳನ್ನು ಬೆಳೆಯಬೇಕು’ ಎಂದರು.

ಬಸವೇಶ್ವರ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಭೀಮಾಶಂಕರ ಪಾಟೀಲ್, ಸತೀಶಕುಮಾರ ಪಾಟೀಲ, ಗೌರಿಶಂಕರ ಪಾಟೀಲ, ಸಿದ್ದಪ್ಪ ಬಿರಾದಾರ, ಗುರುಲಿಂಗಪ್ಪ ಅಷ್ಟಗಿ, ಸೂರ್ಯಕಾಂತ ಕುಂಬಾರ, ಶ್ರೀಕಾಂತ ಪಾಟೀಲ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.