ಕಲಬುರಗಿ: ಕಲಬುರಗಿಯಿಂದ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಸಮೀಪದ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ಗೆ ಸಂಚರಿಸುವ ವಾರದ ವಿಶೇಷ ರೈಲಿಗೆ ಸಂಸದ ಡಾ. ಉಮೇಶ ಜಾಧವ ನಗರದ ರೈಲು ನಿಲ್ದಾಣದಲ್ಲಿ ಶನಿವಾರ ಸಂಜೆ ಹಸಿರು ನಿಶಾನೆ ತೋರಿದರು.
ಕಲಬುರಗಿ–ಬೆಂಗಳೂರು ವಾರದ ವಿಶೇಷ ರೈಲು ಏಪ್ರಿಲ್ 5ರವರೆಗೆ ವಾರದಲ್ಲಿ ಒಂದು ದಿನ ಸಂಚರಿಸಲಿದೆ. ಆ ಬಳಿಕ ವಾರದಲ್ಲಿ ಮೂರು ದಿನ ಓಡಲಿದೆ. ಪ್ರತಿ ಶುಕ್ರವಾರ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ನಿಂದ ರಾತ್ರಿ 11ಕ್ಕೆ ಹೊರಟ ರೈಲು, ಮರುದಿನ (ಶನಿವಾರ) ಬೆಳಿಗ್ಗೆ 9.05ಕ್ಕೆ ಕಲಬುರಗಿ ತಲುಪಲಿದೆ. ಕಲಬುರಗಿಯಿಂದ ಶನಿವಾರ ಸಂಜೆ 5.10ಕ್ಕೆ ಹೊರಡುವ ರೈಲು, ಮರುದಿನ (ಭಾನುವಾರ) ಬೆಳಿಗ್ಗೆ 4.15ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ತಲುಪಲಿದೆ.
ಈ ವೇಳೆ ಮಾತನಾಡಿದ ಸಂಸದ ಜಾಧವ, ‘ಕಲಬುರಗಿಯಿಂದ ನೇರವಾಗಿ ಬೆಂಗಳೂರಿಗೆ ರೈಲು ಸೇವೆ ಕಲ್ಪಿಸಬೇಕೆಂಬ ದಶಕಗಳ ಬೇಡಿಕೆ ಈಡೇರಿಸಲಾಗಿದೆ. ಮಾರ್ಚ್ 12ರಿಂದ ಕಲಬುರಗಿ– ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಸೇವೆ ಆರಂಭವಾಗಲಿದೆ. ಕಲಬುರಗಿಯಿಂದ ಬೆಳಿಗ್ಗೆ 5.15ಕ್ಕೆ ಹೊರಟು ಮಧ್ಯಾಹ್ನ 2ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಮಧ್ಯಾಹ್ನ 2.40ಕ್ಕೆ ಹೊರಟು ರಾತ್ರಿ 11.30ಕ್ಕೆ ಕಲಬುರಗಿ ಮುಟ್ಟಲಿದೆ. ರಾಯಚೂರು, ಮಂತ್ರಾಲಯಂ ರೋಡ್, ಗುಂತಕಲ್, ಅನಂತಪುರ ಮತ್ತು ಯಲಹಂಕ ನಡುವೆ ನಿಲುಗಡೆಯಾಗಲಿದೆ. ವಾರದಲ್ಲಿ ಆರು ದಿನ ಓಡಾಡಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.