ADVERTISEMENT

ಕಲಬುರ್ಗಿ| ಆಹಾರ ಇಲಾಖೆ ಜಂಟಿ ನಿರ್ದೇಶಕ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 11:36 IST
Last Updated 11 ಡಿಸೆಂಬರ್ 2019, 11:36 IST
ಭ್ರಷ್ಟಾಚಾರ ನಿಗ್ರಹ ದಳ
ಭ್ರಷ್ಟಾಚಾರ ನಿಗ್ರಹ ದಳ   

ಕಲಬುರ್ಗಿ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇರೆಗೆ ಜಪ್ತಿ ಮಾಡಲಾಗಿದ್ದ ಲಾರಿಯನ್ನು ಬಿಡುಗಡೆ ಮಾಡಲು ₹ 15 ಸಾವಿರ ಲಂಚ ಪಡೆಯುತ್ತಿದ್ದ ಆಹಾರ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ. ಶ್ರೀಧರ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬುಧವಾರ ಬಲೆಗೆ ಕೆಡವಿದ್ದಾರೆ.

ಕಳೆದ ಮಾರ್ಚ್‌ ತಿಂಗಳಲ್ಲಿ ಆಳಂದ ಬಳಿ ಪಡಿತರ ಅಕ್ಕಿ ಸಾಗಿಸುವ ಲಾರಿಯನ್ನು ಆಹಾರ ಇಲಾಖೆ ಅಧಿಕಾರಿಗಳ ತಂಡವು ದಾಳಿ ನಡೆಸಿ ವಶಪಡಿಸಿಕೊಂಡಿತ್ತು. ಅಂದಿನಿಂದಲೂ ಲಾರಿ ಮಾಲೀಕ ಮೈನುದ್ದೀನ್‌ ಅವರು ಲಾರಿ ಬಿಡುಗಡೆ ಮಾಡಿಸಿಕೊಳ್ಳಲು ಪ್ರಯತ್ನ ಮುಂದುವರಿಸಿದ್ದರು. ಲಾರಿಯು ಪೊಲೀಸರ ವಶದಲ್ಲಿದ್ದರೂ ಅದಕ್ಕೆ ಆಹಾರ ಇಲಾಖೆ ಅಧಿಕಾರಿಗಳ ಅನುಮತಿ ಬೇಕಿತ್ತು. ಈ ಸಂಬಂಧ ಮೈನುದ್ದೀನ್‌ ಆಹಾರ ಇಲಾಖೆ ದ್ವಿತೀಯ ದರ್ಜೆ ಸಹಾಯಕ ಸಂತೋಷ್‌ ಎಂಬುವವರ ಮೂಲಕ ಬಿಡುಗಡೆಗೆ ಪ್ರಯತ್ನಿಸುತ್ತಿದ್ದರು. ಒಟ್ಟು ₹ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ₹ 15 ಸಾವಿರ ನೀಡಿದರೆ ಲಾರಿ ಬಿಡುಗಡೆಗೆ ಅನುಮತಿ ನೀಡುವುದಾಗಿ ಶ್ರೀಧರ್‌ ಎಸ್‌ಡಿಎ ಸಂತೋಷ್‌ ಮೂಲಕ ತಿಳಿಸಿದ್ದರು. ಈ ಬಗ್ಗೆ ಮೈನುದ್ದೀನ್‌ ಅವರು ಮುಂಚೆಯೇ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಮೈನುದ್ದೀನ್‌ ಅವರಿಂದ ಲಂಚದ ಹಣ ಪಡೆದ ಸಂತೋಷ್‌ ಬಳಿಕ ಶ್ರೀಧರ್‌ ಅವರಿಗೆ ಕರೆ ಮಾಡಿ ಹಣ ತಲುಪಿದ್ದಾಗಿ ತಿಳಿಸಿದರು. ಆ ಹಣವನ್ನು ಘಾಟಗೆ ಲೇಔಟ್‌ನಲ್ಲಿರುವ ತಮ್ಮ ಮನೆಗೆ ತರುವಂತೆ ಸೂಚನೆ ನೀಡಿದ್ದಾರೆ. ಸಂತೋಷ್‌ ಮನೆಗೆ ತೆರಳುತ್ತಿದ್ದಂತೆಯೇ ಅವರನ್ನು ಹಿಂಬಾಲಿಸಿದ ಎಸಿಬಿ ಎಸ್ಪಿ ವಿ.ಎಂ. ಜ್ಯೋತಿ ನೇತೃತ್ವದ ಅಧಿಕಾರಿಗಳ ತಂಡವು, ಹಣ ಪಡೆಯುವ ಸಂದರ್ಭದಲ್ಲಿ ದಾಳಿ ನಡೆಸಿ ಶ್ರೀಧರ್‌ ಹಾಗೂ ಸಂತೋಷ್ ಅವರನ್ನು ವಶಕ್ಕೆ ಪಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.