ಕಲಬುರ್ಗಿ: ‘ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮಾತನಾಡಿದ ಮಾಲೀಕಯ್ಯ ಗುತ್ತೇದಾರ ಅವರ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಅರುಣಕುಮಾರ ಎಂ. ಪಾಟೀಲ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಶಿವರಾಜ ಕೆ. ಸಜ್ಜನ್ ಒತ್ತಾಯಿಸಿದ್ದಾರೆ.
ಬಿಜೆಪಿ ಮುಖಂಡರ ನಿಯೋಗದ ನೇತೃತ್ವ ವಹಿಸಿ, ನಗರದ ಪೊಲೀಸ್ ಕಮಿಷನರ್ ಕಚೇರಿಗೆ ತೆರಳಿ ದೂರು ಸಲ್ಲಿಸಿದ ಅವರು, ‘ಪ್ರಚೋದನಕಾರಿ ಹೇಳಿಕೆಯಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದರು.
ಈ ಸಂಬಂಧ ಅರುಣಕುಮಾರ ಅವರು ಮಾತನಾಡಿರುವ ವಿಡಿಯೊ ಕ್ಯಾಸೆಟ್ ಅನ್ನು ಸಾಕ್ಷಿಯಾಗಿ ನೀಡಿದ್ದಾರೆ. ಲತೀಫಸಾಬ್ ಜಹಗೀರದಾರ, ಸಿದ್ದರಾಜ ಬಿರಾದಾರ, ಸಾಗರ ರಾಠೋಡ, ಮಲ್ಲು ಗುಡಬಾ, ರವಿ ಮಾದನಕರ, ಸೋಮಲಿಂಗಯ್ಯ ಹಿರೇಮಠ, ವಿಶ್ವನಾಥ ಸಾವಕಾರ, ಪರಮೇಶ್ವರ ಬಾರ್ಕಿ, ಚಂದ್ರಕಾಂತ ಬಸ್ನಾಳ, ಷಣ್ಮುಖಪ್ಪ ಸಿಬರಬಂಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.