ಕಲಬುರ್ಗಿ: ಈ ಭಾಗದ ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿ ಆರಂಭವಾದ ಕರ್ನಾಟಕ ಕೇಂದ್ರೀಯ ವಿ.ವಿ.ಯಲ್ಲಿ ನಡೆಯುವ ಯಾವ ಚಟುವಟಿಕೆಗಳ ಬಗ್ಗೆಯೂ ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವುದಿಲ್ಲ. ವಿ.ವಿ. ಕಲಬುರ್ಗಿಯಲ್ಲಿಲ್ಲವೇ ಎಂದು ಸಂಸದ ಡಾ.ಉಮೇಶ ಜಾಧವ ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಸಮನ್ವಯ ಮತ್ತು ಮೇಲ್ವಿಚಾರಣೆ ಸಮಿತಿ (ದಿಶಾ) ಸಭೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಫೆಬ್ರುವರಿಯಲ್ಲಿ ವಿ.ವಿ. ಆವರಣದಲ್ಲಿ ಕೋವಿಡ್ ತಪಾಸಣೆ ಕೇಂದ್ರ ಆರಂಭಿಸಲು ಅನುಮತಿ ಸಿಕ್ಕಿದೆ. ಎಲ್ಲ ಯಂತ್ರಗಳು ಬಂದಿವೆ ಎಂದು ವಿ.ವಿ. ಸಮ ಕುಲಪತಿ ಪ್ರೊ.ಜಿ.ಆರ್.ನಾಯಕ್ ಹೇಳಿದರು.
ಇದರಿಂದ ಗರಂ ಆದ ಜಾಧವ ಹಾಗೂ ಜಿಲ್ಲಾಧಿಕಾರಿ ಶರತ್ ಬಿ., ಕೋವಿಡ್ ಕೇಂದ್ರ ಇಲ್ಲವೆಂದು ನಾವು ಚಿಂತೆ ಮಾಡುತ್ತಿದ್ದೇವೆ. ನೀವು ಎಲ್ಲ ಸಿದ್ಧತೆ ಮಾಡಿಕೊಂಡರೂ ನಮಗೆ ತಿಳಿಸದಿದ್ದರೆ ಹೇಗೆ? ಮುಂಚೆಯೇ ತಿಳಿಸಿದ್ದರೆ ಅಲ್ಲಿ ಅಫಜಲಪುರ, ಅಳಂದ ಹಾಗೂ ಕಲಬುರ್ಗಿ ತಾಲ್ಲೂಕಿನ ಕೋವಿಡ್ ಶಂಕಿತರನ್ನು ತಪಾಸಣೆಗೆ ಕಳಿಸುತ್ತಿದ್ದೆವು. ಕೋವಿಡ್ ತಪಾಸಣೆ ಆರಂಭಿಸುವ ಬಗ್ಗೆ ಸರ್ಕಾರದ ಕಾರ್ಯದರ್ಶಿ ಅವರಿಂದ ಇಂದು ಪತ್ರ ಬಂದ ಬಳಿಕ ಗೊತ್ತಾಯಿತು ಎಂದರು.
ಸಾಕಷ್ಟು ಶ್ರಮ ಹಾಕಿ ವಿ.ವಿ.ಯನ್ನು ಕಲಬುರ್ಗಿಗೆ ತಂದಿದ್ದೇವೆ. ಯಾವುದಕ್ಕೂ ನಮ್ಮನ್ನು ಕರೆಯಲ್ಲ ಎಂದು ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ಆಕ್ಷೇಪ ವ್ಯಕ್ತಪಡಿಸಿದರು.
ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ಬರುವ ಎಲ್ಲ ಸುತ್ತೋಲೆ, ಪತ್ರಗಳ ಪ್ರತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ನನ್ನ ಕಚೇರಿ ಹಾಗೂ ಬೀದರ್ ಸಂಸದ (ಆಳಂದ ತಾಲ್ಲೂಕು ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ) ಭಗವಂತ ಖೂಬಾ ಅವರ ಕಚೇರಿಗೆ ಕಳಿಸಿಕೊಡಬೇಕು ಎಂದು ಸಂಸದ ಡಾ. ಜಾಧವ ವಿ.ವಿ. ಕುಲಸಚಿವ ಮುಷ್ತಾಕ್ ಅಹ್ಮದ್ ಐ. ಪಟೇಲ್ ಅವರಿಗೆ ತಾಕೀತು ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.