ಪ್ರಜಾವಾಣಿ ವಾರ್ತೆ
ಕಾಳಗಿ: ‘ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಅವರಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ₹5ಕೋಟಿ ಅನುದಾನ ಮಂಜೂರು ಮಾಡಿದ್ದು, ಅದರಲ್ಲಿ ₹2ಕೋಟಿ ಕಾಳಗಿ ಪಟ್ಟಣದ ಅಭಿವೃದ್ಧಿಗೆ ಖರ್ಚು ಮಾಡಲು ಉದ್ದೇಶಿಸಲಾಗಿದೆ’ ಎಂದು ಜಿ.ಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜನತೆಗೆ ನೀಡಿರುವ ಭರವಸೆಯಂತೆ ಅಧಿವೇಶನ ಮುಗಿದ ಕೂಡಲೇ ವಾರ್ಡ್ ನಂ.1ರಲ್ಲಿ ಮಾದರಿ ಮಹಿಳಾ ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಅವಶ್ಯಕತೆ ಇದ್ದಲ್ಲಿ ಈ ಶೌಚಾಲಯ ನಿರ್ಮಿಸಲಾಗುವುದು ಎಂದರು.
ಎಲ್ಲಾ ವಾರ್ಡ್ಗಳಲ್ಲಿ ಅತಿ ಅಗತ್ಯವೆನಿಸುವ ಕಾಮಗಾರಿಗಳಿಗೆ ಒತ್ತು ಕೊಡಲಾಗುವುದು. ಈವರೆಗೆ ಸ್ಥಳೀಯವಾಗಿ ವಿವಿಧ ಕಾಮಗಾರಿಗಳಿಗೆ ₹50ಲಕ್ಷ ಅನುದಾನ ವೆಚ್ಚ ಮಾಡಲಾಗಿದೆ. ಏತ ನೀರಾವರಿ ಅಭಿವೃದ್ಧಿಗೆ ಸರ್ಕಾರದಿಂದ ₹4ಕೋಟಿ ಮಂಜೂರು ಮಾಡಿಸಲಾಗಿದೆ’ ಎಂದು ತಿಳಿಸಿದರು.
‘ಅಭಿವೃದ್ಧಿ ವಿಷಯದಲ್ಲಿ ಯಾರೂ ರಾಜಕೀಯ ಮಾಡಲಾರದೆ ಎಲ್ಲರೂ ಕೈಜೋಡಿಸಿ ಸಹಕಾರ ನೀಡಬೇಕು’ ಎಂದು ವಿರೋಧ ಪಕ್ಷದವರಿಗೆ ಕಿವಿಮಾತು ಹೇಳಿದರು.
ಮುಖಂಡ ವಿಶ್ವನಾಥ ವನಮಾಲಿ, ಪರಮೇಶ್ವರ ಮಡಿವಾಳ, ಶಾಮರಾವ ಕಡಬೂರ, ಸಿದ್ರಾಮಪ್ಪ ಕಮಲಾಪುರ, ರವಿದಾಸ ಪತಂಗೆ, ಸಿದ್ದಲಿಂಗ ಗುತ್ತೇದಾರ, ಮೆಹೆಬೂಬಬೇಗ ಬಿಜಾಪುರ, ಪಟ್ಟಣ ಪಂಚಾಯಿತಿ ನೂತನ ಸದಸ್ಯರಾದ ಬಸವರಾಜ ಮಡಿವಾಳ, ಗುರುರಾಜ ಮದ್ದೂರ, ಶರಣಪ್ಪ ಬೇಲೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.