
ಕಾಳಗಿ: ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬಿದ್ದು ಎರಡು ತಿಂಗಳೇ ಉರುಳಿದರೂ ಗೆದ್ದ ಅಭ್ಯರ್ಥಿಗಳ ಹೆಸರು ಕರ್ನಾಟಕ ರಾಜ್ಯಪತ್ರದಲ್ಲಿ ಉಲ್ಲೇಖವಾಗಿಲ್ಲ. ಅಲ್ಲದೇ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ದಿನಾಂಕವೂ ಪ್ರಕಟವಾಗಿಲ್ಲ.
ಐದು ವರ್ಷದ ಒಂದು ಅವಧಿಯೆ ಕಳೆದುಹೋದ ಮೇಲೆ ಪ್ರಥಮ ಬಾರಿಗೆ ನಡೆದ ಇಲ್ಲಿನ ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಕಳೆದ ಆಗಸ್ಟ್ 20ರಂದು ಪ್ರಕಟಗೊಂಡಿದೆ.
ಈ ಚುನಾವಣೆಯ ಮೊದಲೇ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಹೊರಹೊಮ್ಮಿ ಅಧ್ಯಕ್ಷ ಸ್ಥಾನ ‘ಸಾಮಾನ್ಯ ವರ್ಗ’ ಮತ್ತು ಉಪಾಧ್ಯಕ್ಷ ಸ್ಥಾನ ‘ಪರಿಶಿಷ್ಟ ಜಾತಿ’ಗೆ ನಿಗದಿಯಾಗಿದೆ.
ಕಾಳಗಿ ತಾಲ್ಲೂಕಾದ ಮೇಲೆ ಹಾಗೂ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಮೇಲೆ ಇದು ಪ್ರಥಮ ಚುನಾವಣೆ ಆಗಿದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಭಾರಿ ಹುಮ್ಮಸ್ಸಿನಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಅಷ್ಟೇ ಅಲ್ಲದೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಇದೇ ಊರಿನವರಾಗಿದ್ದರಿಂದ ಮತ್ತು ಚಿಂಚೋಳಿ ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ ಇದೇ ತಾಲ್ಲೂಕಿನವರಾಗಿದ್ದರಿಂದ 11ವಾರ್ಡ್ಗಳಿಗೂ ಜಿದ್ದಾಜಿದ್ದಿಯಿಂದ ಎದುರಿಸಿ ಕಾಂಗ್ರೆಸ್ಸಿನ 6 ಮತ್ತು ಬಿಜೆಪಿಯ 5 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಗೆದ್ದ ಅಭ್ಯರ್ಥಿಗಳೆಲ್ಲರೂ ಹೊಸ ಮುಖಗಳೇ ಆಗಿದ್ದು, ಮಾತು ಎತ್ತಿದರೆ ಸಾಕು ‘ಅಧಿಕಾರ ಸ್ವೀಕಾರ’ ಇನ್ನು ಯಾವಾಗ? ಎಂಬ ಚರ್ಚೆಯೆ ಕೇಳಿಬರುತ್ತಿದೆ. ಮೊದಲೇ ಪಂಚಾಯಿತಿಗೆ ಜನಪ್ರತಿನಿಧಿಗಳಿಲ್ಲದೇ ಅಧಿಕಾರಿಗಳ ಆಡಳಿತದ ನಡುವೆ ಚುನಾವಣೆಯಾಗಿದೆ.
ವಾರ್ಡ್ಗಳಲ್ಲಿ ಹೆಪ್ಪುಗಟ್ಟಿರುವ ಹಲವು ಸಮಸ್ಯೆಗಳು ಚುನಾಯಿತ ಪ್ರತಿನಿಧಿಗಳಿಗೆ ತಲೆ ತಿನ್ನುತ್ತಿವೆ. ಅಧಿಕೃತ ಆಡಳಿತ ಮಂಡಳಿ ಇಲ್ಲದೆ ಸರ್ಕಾರದ ಅನುದಾನ ಕೈತಪ್ಪಿ ಹೋಗುತ್ತಿದೆ.
ಒಟ್ಟಾರೆ, ನೂತನ ಅಧ್ಯಕ್ಷ-ಉಪಾಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿ ಅಭ್ಯರ್ಥಿಗಳು ಆಯ್ಕೆ ಮುಹೂರ್ತಕ್ಕೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಕೋರ್ಟ್ನಲ್ಲಿ ವಾರ್ಡ್ವೊಂದರ ಕೇಸ್ ನಡೆಯುತ್ತಿದ್ದರಿಂದ ತಡವಾಗುತ್ತಿದ್ದು ಮುಂದಿನ ತಿಂಗಳು ಅಧಿಸೂಚನೆ ಪ್ರಕಟಗೊಳ್ಳಲಿದೆ-ಪೃಥ್ವಿರಾಜ ಪಾಟೀಲ, ತಹಶೀಲ್ದಾರ್ ಕಾಳಗಿ
ಗೆದ್ದ ಅಭ್ಯರ್ಥಿಗಳ ಗೆಜೆಟ್ ಈ ವಾರದಲ್ಲಿ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಅನುದಾನವಿಲ್ಲದೇ ಅಭಿವೃದ್ಧಿಗೆ ತೊಡಕಾಗುತ್ತಿದೆ.-ಪಂಕಜಾ ಎ., ಮುಖ್ಯಾಧಿಕಾರಿ ಪ.ಪಂ ಕಾಳಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.