ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಶನಿವಾರ ಭಾರಿ ಸುರಿದಿದೆ. ನದಿಗಳು ಉಕ್ಕಿಹರಿಯುತ್ತಿದ್ದು, ಜಲಾಶಯಗಳಿಂದ ಹೊರಹರಿವಿನ ಪ್ರಮಾಣ ಹೆಚ್ಚಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಕಲಬುರಗಿ ನಗರದಲ್ಲಿ ಸಂಜೆ ಬಿರುಸಿನ ಮಳೆ ಸುರಿಯಿತು. ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಮುಲ್ಲಾಮಾರಿ ಮತ್ತು ಅದರ ಉಪನದಿಗಳು ತುಂಬಿ ಹರಿದಿವೆ.
ಕೊಪ್ಪಳ ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದಿದೆ. ಉತ್ತಮ ಮಳೆಯಾಗಿ ಕೊಪ್ಪಳ ತಾಲ್ಲೂಕಿನಲ್ಲಿರುವ ಹಿರೇಹಳ್ಳ ಜಲಾಶಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಬಂದಿದ್ದು, ಜಲಾಶಯದಿಂದ ಹೊರಗೆ ನೀರು ಹರಿಸಿದ ಪರಿಣಾಮ ಬೆಳೆಗಳು ಕೊಚ್ಚಿ ಹೋಗಿವೆ.
ತಾಲ್ಲೂಕಿನ ಹಿರೇಸಿಂಧೋಗಿ ಹಾಗೂ ಮುದ್ಲಾಪುರ ಬಳಿ ಮೆಕ್ಕಜೋಳ ಬೆಳೆದಿದ್ದ ಹೊಲಗಳಿಗೆ ನೀರು ನುಗ್ಗಿತು. ಹೊಲಗಳಿಗೆ ನುಗ್ಗಿದ ಕಳೆ ತೆಗೆದು ಹಾಕಲು ರೈತರು ಸಾಕಷ್ಟು ಶ್ರಮಿಸಿದರು. ಮಳೆ ಹೆಚ್ಚಳವಾಗಿದ್ದರಿಂದ ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಜಿಲ್ಲೆಯಾದ್ಯಂತ ಮೂರು ದಿನಗಳಿಂದ ಮಳೆ ಆಗಾಗ ಸುರಿಯುತ್ತಿದೆ. ಶನಿವಾರ ಬೆಳಿಗ್ಗೆಯಿಂದಲೇ ಜಿಟಿಜಿಟಿ ಮಳೆ ಸುರಿದಿದ್ದು, ಮಧ್ಯಾಹ್ನ ಜೋರಾಯಿತು.
ರಾಯಚೂರು, ಸಿಂಧನೂರು ಹಾಗೂ ದೇವದುರ್ಗ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.