ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ಆಟೊದಲ್ಲಿ ಬಂದು ಶರಣಾದ ಆರೋಪಿ ಮಂಜುನಾಥ ಮೇಳಕುಂದಿ

ಸಿಐಡಿ ಎದುರು ಹಾಜರು

​ಪ್ರಜಾವಾಣಿ ವಾರ್ತೆ
Published 1 ಮೇ 2022, 9:09 IST
Last Updated 1 ಮೇ 2022, 9:09 IST
ಆರೋಪಿ ಮಂಜುನಾಥ ಮೇಳಕುಂದಿ
ಆರೋಪಿ ಮಂಜುನಾಥ ಮೇಳಕುಂದಿ   

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ 20 ದಿನಗಳಿಂದ ತಲೆ ಮರೆಸಿಕೊಂಡಿದ್ದ ಇನ್ನೊಬ್ಬ ಪ್ರಮುಖ ಆರೋಪಿ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್‌ ಮಂಜುನಾಥ ಮೇಳಕುಂದಿ ಭಾನುವಾರ ಖುದ್ದಾಗಿ ಸಿಐಡಿಗೆ ಶರಣಾದರು.

ಯಾರಿಗೂ ಏನೊಂದೂ ಸುಳಿವು ಸಿಗದಂತೆ ನೇರವಾಗಿ ಆಟೊದಲ್ಲಿ ಬಂದ ಮಂಜುನಾಥ, ಇಲ್ಲಿನ ಐವಾನ್‌ ಇ ಶಾಹಿ ಅತಿಥಿಗೃಹದಲ್ಲಿ ಸಿಐಡಿ ಕ್ಯಾಂಪ್‌ ಕಚೇರಿಗೆ ಬಂದರು. ಚಾಲಕನಿಗೆ ಹಣ ಕೊಟ್ಟ ನಂತರ ತಮ್ಮ ಜೊತೆಗೆ ತಂದಿದ್ದ ಬ್ಯಾಗನ್ನು ಹೆಗಲೇರಿಸಿಕೊಂಡು ಒಳಗೆ ಹೋದರು.

ಸ್ಥಳದಲ್ಲಿದ್ದ ಮಾಧ್ಯಮದವರನ್ನು ಕಂಡು ‘ನನ್ನದೇನೂ ತಪ್ಪಿಲ್ಲ. ಸುಮ್ಮನೇ ಪ್ರಕರಣದಲ್ಲಿ ಸಿಕ್ಕಿಸುತ್ತಿದ್ದಾರೆ’ ಎಂದು ಹೇಳಿದರು. ಅಷ್ಟರಲ್ಲಿ ಹೊರಗೆ ಬಂದ ಪೊಲೀಸರು ಅವರನ್ನು ಕಚೇರಿಯ ಒಳಗೆ ಕರೆದೊಯ್ದರು.

ADVERTISEMENT

ಇಷ್ಟು ದಿನ ಸಣ್ಣ ಸುಳಿವೂ ಸಿಗದಂತೆ ತಲೆಮರೆಸಿಕೊಂಡಿದ್ದ ಪ‍್ರಮುಖ ಆರೋಪಿ, ಏಕಾಏಕಿ ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದು ಅಚ್ಚರಿ ಮೂಡಿಸಿದೆ.

ಮಂಜುನಾಥ ಸೇರಿದಂತೆ ಮುಖ್ಯಶಿಕ್ಷಕ ಕಾಶಿನಾಥ, ಮಹಿಳಾ ಅಭ್ಯರ್ಥಿ ಶಾಂತಿಬಾಯಿ ಹಾಗೂ ಒಬ್ಬ ಶಿಕ್ಷಕಿ ವಿರುದ್ಧ ನ್ಯಾಯಾಲಯ ಬಂಧನ ವಾರೆಂಟ್‌ ಕೂಡ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.