ADVERTISEMENT

ಕೆಕೆಆರ್‌ಡಿಬಿಗೆ ಬಿಡುಗಡೆಯಾಗದ ಅನುದಾನ

ಮಂಡಳಿ ಖಾತೆಯಲ್ಲಿನ ಅನುದಾನ ಮೊದಲು ಖರ್ಚು ಮಾಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 6:33 IST
Last Updated 15 ಡಿಸೆಂಬರ್ 2025, 6:33 IST
ಸುನಿಲ್ ವಲ್ಯಾಪುರೆ
ಸುನಿಲ್ ವಲ್ಯಾಪುರೆ   

ಕಲಬುರಗಿ: ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಕೆಆರ್‌ಡಿಬಿ)ಯಿಂದ 2025-26ನೇ ಸಾಲಿನ ಕಾಮಗಾರಿಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡಿರುವುದಿಲ್ಲ’ ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್‌ ಉತ್ತರಿಸಿದ್ದಾರೆ.

ವಿಧಾನ ಪರಿಷತ್‌ ಸದಸ್ಯ ಸುನಿಲ್‌ ವಲ್ಯಾಪುರೆ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.

‘2025ನೇ ಸಾಲಿನಲ್ಲಿ ಆರಂಭಿಕ ಶಿಲ್ಕು ₹3090.24 ಕೋಟಿಗಳಿದ್ದು, ಈವರೆಗೆ ₹1628.49 ಕೋಟಿ ವೆಚ್ಚ ಮಾಡಲಾಗಿದೆ. ಮಂಡಳಿ ಪಿ.ಡಿ ಖಾತೆಯಲ್ಲಿ ಇನ್ನೂ ₹1461.75 ಕೋಟಿ ಅನುದಾನ ಮಂಡಳಿಯಲ್ಲಿ ಬಾಕಿ ಇರುವುದರಿಂದ ಈ ಅನುದಾನವನ್ನು ಖರ್ಚು ಮಾಡಿ, ನಂತರ ಪ್ರಸ್ತಾವನೆ ಸಲ್ಲಿಸಲು ಆರ್ಥಿಕ ಇಲಾಖೆಯು ಸೂಚಿಸಿದೆ. ಇದರಿಂದ ಕೆಕೆಆರ್‌ಡಿಬಿಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

‘2025-26ನೇ ಸಾಲಿನ ಮಂಡಳಿಯ ಕ್ರಿಯಾಯೋಜನೆಯನ್ನು ರೂಪಿಸಲು ರಾಜ್ಯಪಾಲರ ಅನುಮೋದನೆ ಪಡೆದು, ಸರ್ಕಾರ ಜುಲೈ 25ರಂದು ಆದೇಶ ಹೊರಡಿಸಿದೆ. ಅದರಂತೆ, ಮಂಡಳಿಯು ಈವರೆಗೆ ₹1401.87 ಕೋಟಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ. ಬಾಕಿ ಉಳಿದ ಅನುದಾನ ₹3598.13 ಕೋಟಿಗಳಿಗೆ ಕ್ರಿಯಾಯೋಜನೆ ರೂಪಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಮೈಕ್ರೊ/ ಮ್ಯಾಕ್ರೊ ಕ್ರಿಯಾಯೋಜನೆಯಡಿ ಆಯಾ ಜಿಲ್ಲಾಧಿಕಾರಿಗಳಿಗೆ ನಿಗದಿತ ವೇಳೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಕ್ರಿಯಾಯೋಜನೆ ವಿವರ ನೀಡದ ಕಾರಣ ಡಿ.ಸಿಗಳಿಂದ ಕ್ರಿಯಾಯೋಜನೆ ಮಂಡಳಿಗೆ ಸಲ್ಲಿಸಲು ವಿಳಂಬವಾಗುತ್ತಿದೆ’ ಎಂದು ಸಚಿವರು ಹೇಳಿದ್ದಾರೆ.

‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 2025-26ನೇ ಸಾಲಿನಲ್ಲಿ ಬೀದರ್‌ ಜಿಲ್ಲೆಗೆ ₹437.91 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಪ್ರಸಕ್ತ ಸಾಲಿನ ಕಾಮಗಾರಿಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡಿರುವುದಿಲ್ಲ’ ಎಂದು ಸಚಿವರು ತಿಳಿಸಿದ್ದಾರೆ.

ಸುನಿಲ್‌ ವಲ್ಯಾಪುರೆ ಅವರಿಗೆ ಸಚಿವರು ನೀಡಿದ ಉತ್ತರ ಪತ್ರದಲ್ಲಿ ವಿಧಾನ ಸಭೆಯಿಂದ ಚುನಾಯಿತರಾದವರು ಎಂದು ಬರೆಯಲಾಗಿದೆ. ವಲ್ಯಾಪುರೆ ಅವರು ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.