ಕಲಬುರಗಿ: ರಾಜ್ಯ ಸರ್ಕಾರದ ಆದೇಶದಂತೆ ಜ.21ರಂದು ನಿಗದಿಯಾಗಿರುವ ಅಂಬಿಗರ ಚೌಡಯ್ಯ ಜಯಂತಿಯನ್ನು ಎಲ್ಲ ಶಾಲಾ–ಕಾಲೇಜು ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಕಟ್ಟುನಿಟ್ಟಾಗಿ ಆಚರಿಸಬೇಕು. ಈ ಕುರಿತು ಜಿಲ್ಲಾಡಳಿತ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್ಟಿ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಚ್ಚಪ್ಪ ಎಸ್.ಜಮಾದಾರ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೆ ಚೌಡಯ್ಯ ಜಯಂತಿ ಆಚರಿಸದೇ ಅವಮಾನ ಮಾಡಿರುವ ಘಟನೆಗಳು ಕಂಡುಬಂದಿವೆ. ಈ ಬಾರಿ ಅಂಥ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಪೂಜೆಗೆ ಅವಕಾಶ ಕೊಡಿ: ‘ಕಲಬುರಗಿಯ ಶಹಾಬಜಾರ ನಾಕಾ ಹತ್ತಿರ ಅಂಬಿಗರ ಚೌಡಯ್ಯ ವೃತ್ತದಲ್ಲಿ ಜಯಂತ್ಯುತ್ಸವ ಆಚರಣೆಗೆ ಪೊಲೀಸರು ಅನಗತ್ಯ ತೊಂದರೆ ನೀಡುತ್ತಿದ್ದಾರೆ. ವೃತ್ತದಲ್ಲಿ ಸ್ವಚ್ಛತೆ ಹಾಗೂ ಪೂಜೆ ಸೇರಿದಂತೆ ಚೌಡಯ್ಯ ಜಯಂತ್ಯುತ್ಸವ ಆಚರಣೆಗೆ ತಡೆ ಒಡ್ಡುತ್ತಿದ್ದಾರೆ. ಈ ಕುರಿತು ಯಾವುದೇ ಕೋರ್ಟ್ಗಳಲ್ಲಿ ತಕರಾರು ಅರ್ಜಿಗಳೂ ಇಲ್ಲ. ಹೀಗಾಗಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯು ಪೊಲೀಸರಿಗೆ ನಿರ್ದೇಶನ ನೀಡುವ ಮೂಲಕ ಚೌಡಯ್ಯ ವೃತ್ತದಲ್ಲಿ ಜಯಂತ್ಯುತ್ಸವ ಮುಕ್ತವಾಗಿ ಆಚರಿಸಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಗುಡಬಾ, ಶಿವು ಧಣ್ಣಿ, ಅಂಬಾರಾಯ ಜವಳಗಾ, ಜಯಶ್ರೀ ಕಟ್ಟೀಮನಿ, ಶರಣು ಜಮಾದಾರ, ಯಲ್ಲಪ್ಪ ಯಾದವ್ ಸೇರಿದಂತೆ ಹಲವು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.