ADVERTISEMENT

ಕುಷ್ಟಗಿ: ಗಗನಕ್ಕೇರಿದ ದೇಶೀಯ ಎತ್ತುಗಳ ಬೆಲೆ

ಬೇಡಿಕೆ ಹೆಚ್ಚಿಸಿದ ಮುಂಗಾರು ಹಂಗಾಮು, ಜೋಡೆತ್ತಿಗೆ ₹ 1 ಲಕ್ಷದಿಂದ ₹ 2 ಲಕ್ಷದವರೆಗೆ

ನಾರಾಯಣರಾವ ಕುಲಕರ್ಣಿ
Published 19 ಮೇ 2025, 5:45 IST
Last Updated 19 ಮೇ 2025, 5:45 IST
ಕುಷ್ಟಗಿಯಲ್ಲಿ ಭಾನುವಾರ ಜಾನುವಾರು ಸಂತೆಯಲ್ಲಿ ಮಾರಾಟಕ್ಕೆ ಬಂದಿದ್ದ ಎತ್ತುಗಳು
ಕುಷ್ಟಗಿಯಲ್ಲಿ ಭಾನುವಾರ ಜಾನುವಾರು ಸಂತೆಯಲ್ಲಿ ಮಾರಾಟಕ್ಕೆ ಬಂದಿದ್ದ ಎತ್ತುಗಳು   

ಕುಷ್ಟಗಿ: ‘ಎತ್ತುಗಳ ಬೆಲೆ ಜಾಸ್ತಿಯಾಗಿದೆ. ಕಸಾಯಿ ಖಾನೆಯವರು ಬಂದು ಹೆಚ್ಚು ಹಣ ಕೊಟ್ಟು ಖರೀದಿಸುತ್ತಾರೆ. ಹೀಗಾಗಿ ಬಡ ರೈತರು ಎತ್ತು ಖರೀದಿ ಸಾಧ್ಯವಾಗುತ್ತಿಲ್ಲ..’ ಇವು ಪಟ್ಟಣದ ಜಾನುವಾರ ಸಂತೆಯಲ್ಲಿ ಭಾನುವಾರ ಎತ್ತುಗಳ ಖರೀದಿಗೆ ಬಂದಿದ್ದ ಮುದ್ದೇಬಿಹಾಳ ತಾಲ್ಲೂಕಿನ ಕೋಳೂರಿನ ರೈತ ಆದಪ್ಪ ಅರಸನಾಳ ಅವರು ಆಡಿದ ಮಾತುಗಳು.

ರೈತ ಆದಪ್ಪ ಅವರ ಮುಖದಲ್ಲಿ ಹತಾಶೆ, ನಿರಾಸೆಯ ಭಾವವಿತ್ತು. ಮುಂಗಾರು ಹಂಗಾಮು ಆರಂಭಗೊಳ್ಳುತ್ತಿದ್ದಂತೆ ದೇಸಿ ಎತ್ತುಗಳಿಗೆ ಬೇಡಿಕೆ ಹೆಚ್ಚಿದೆ. ಜತೆಗೆ ಬೆಲೆಯೂ ಗಗನಕ್ಕೇರಿದೆ. ದುಬಾರಿ ಬೆಲೆ ಕೊಟ್ಟು ಎತ್ತುಗಳ ಖರೀದಿ ಸಾಧ್ಯವಾಗದೆ, ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.

ಇತ್ತೀಚಿನ ದಿನಗಳಲ್ಲಿ ಎತ್ತುಗಳನ್ನು ಇಟ್ಟುಕೊಳ್ಳುವ ರೈತರು ವಿರಳ. ಹಿಂದಿನ ದಿನಗಳಲ್ಲಿ ಊರ ತುಂಬೆಲ್ಲ ಎತ್ತು, ಹೋರಿಗಳು ಇರುತ್ತಿದ್ದವು. ಹೆಚ್ಚು ಎತ್ತುಗಳನ್ನು ಸಾಕಿದ ರೈತನಿಗೆ ಗತ್ತು ಇರುತ್ತಿತ್ತು. ಆದರೆ ಕಾಲ ಬದಲಾಗಿದೆ. ರೈತರ ಮನೆಯ ಮುಂದೆ ಈಗ ಟ್ರ್ಯಾಕ್ಟರ್‌ಗಳು ನಿಂತಿವೆ. ಹೀಗಾಗಿ ಎತ್ತುಗಳ ಬೆಲೆ ಹೆಚ್ಚಿದೆ ಎಂದು ಮೂಗನೂರಿನ ರೈತ ಹನುಮಗೌಡ ಹೇಳಿದರು.

ADVERTISEMENT

ಟ್ರ್ಯಾಕ್ಟರ್‌ಗಳಿಂದ ಎಷ್ಟೇ ಬೇಸಾಯ ಮಾಡಿದರೂ ಎತ್ತು, ಕೂರಿಗೆಯಿಂದ ಬಿತ್ತಿದರೆ ಉತ್ತಮ. ಹೀಗಾಗಿ ನಮ್ಮಂಥ ರೈತರು ಬಿತ್ತನೆಗೆ ಎತ್ತುಗಳನ್ನು ಬಳಸುತ್ತೇವೆ. ಆದರೆ ಎತ್ತುಗಳನ್ನು ಸಾಕುವುದು, ಅವುಗಳಿಂದ ಬೇಸಾಯ ಮಾಡುವ ಪರಂಪರೆ, ಸಂಸ್ಕಾರ ಮಾಯವಾಗುತ್ತಿದೆ. ಎತ್ತುಗಳು ಅಪರೂಪವಾಗುತ್ತಿವೆ ಎಂದು ಹಿರೇಅರಳಿಹಳ್ಳಿ ರೈತ ಶರಣಪ್ಪ ಹೊಸೂರು ನೆನಪಿಸಿಕೊಂಡರು.

ಭಾನುವಾರ ಇಲ್ಲಿಯ ಜಾನುವಾರು ಸಂತೆಯಲ್ಲಿ ಇಂಥ ಅನೇಕ ಸಂಗತಿಗಳು ಅನಾವರಣಗೊಂಡವು. ಎತ್ತುಗಳನ್ನು ಮಾರಾಟ ಮಾಡುವವರಿಗಿಂತ ಖರೀದಿಸುವ ರೈತರ ಸಂಖ್ಯೆ ಹೆಚ್ಚಾಗಿತ್ತು. ಆದರೆ ಬೆಲೆ ಮಾತ್ರ ಗಗನಕ್ಕೇರಿದ್ದು ಸಾಮಾನ್ಯ ರೈತರು ಎತ್ತುಗಳನ್ನು ಖರೀದಿಸಲಾಗಲಿಲ್ಲ. ಮಾರಾಟಕ್ಕೆ ಬಂದಿದ್ದವರು ಬೆಲೆ ಕಡಿಮೆಗೊಳಿಸಲಿಲ್ಲ.

ದುಬಾರಿ ಬೆಲೆ: ಸಂತೆಯಲ್ಲಿ ಬಹಳಷ್ಟು ಎತ್ತುಗಳು ಮಾರಾಟಕ್ಕೆ ಬಂದಿದ್ದೂ ಒಂದು ವಿಶೇಷವಾಗಿತ್ತು. ಕನಿಷ್ಠವೆಂದರೂ ಉತ್ತಮ ಜೋಡಿ ಎತ್ತುಗಳ ಬೆಲೆ ₹ 1 ಲಕ್ಷ ದಾಟಿತ್ತು. ಗರಿಷ್ಠ  ₹ 1.80 ಲಕ್ಷಕ್ಕೆ ಎತ್ತಿನ ಜೋಡಿ ಮಾರಾಟವಾಗಿವೆ ಎಂದು ಕ್ಯಾದಿಗುಪ್ಪ ರೈತ ರಾಮಣ್ಣ ಮರಾಠಿ, ಮೂಗನೂರಿನ ಬಸನಗೌಡ ಶಿರೋಳ ಇತರೆ ರೈತರು ಎತ್ತುಗಳ ದರಪಟ್ಟಿ ನೀಡಿದರು.

ಹೆಚ್ಚಿನ ಹಣದ ಆಸೆಗೆ ಕೆಲವರು ಕಸಾಯಿ ಖಾನೆಯವರಿಗೆ ಎತ್ತುಗಳನ್ನು ಮಾರುತ್ತಾರೆಯೇ ಹೊರತು ಬಿತ್ತಿ ಬೆಳೆಯುವ ರೈತರಿಗೆ ಮಾತ್ರ ಕೊಡುವುದಿಲ್ಲ
ಮುದಿಯಪ್ಪ ಅರಸನಾಳ ಮುದ್ದೇಬಿಹಾಳ ರೈತ
ಎಲ್ಲ ಎತ್ತು ಹಸು ಕರುಗಳೆಲ್ಲ ಕಸಾಯಿ ಖಾನೆಯ ಪಾಲಾಗುತ್ತಿವೆ. ದಷ್ಟಪುಷ್ಟ ದೇಸಿ ಎತ್ತು ಹೋರಿಗಳನ್ನು ಕಂಡರೆ ಬಿಡುವುದಿಲ್ಲ. ಹೀಗಾದರೆ ಕೆಲ ವರ್ಷಗಳಲ್ಲಿ ಸಂತತಿ ಕಣ್ಮರೆಯಾಗುತ್ತದೆ
ಹನುಮಂತ ನೀರಲೂಟಿ ರೈತ
ಸದ್ಯದ ದಿನಗಳಲ್ಲಿ ಎತ್ತುಗಳನ್ನು ಸಾಕಾಣಿಕೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಸಂತೆಯಲ್ಲಿ ಉತ್ತಮ ಜೋಡಿ ಎತ್ತುಗಳ ಬೆಲೆ ₹2 ಲಕ್ಷಕ್ಕೆ ತಲುಪಿದೆ
ಭೀಮನಗೌಡ ತೋಪಲಕಟ್ಟಿ ರೈತ

ಕಸಾಯಿ ಖಾನೆಗಳ ದರ ಪೈಪೋಟಿ

ಎತ್ತುಗಳ ಬೆಲೆ ಇಷ್ಟೊಂದು ಹೆಚ್ಚಾಗುವುದಕ್ಕೆ ಕಾರಣವೇನು? ಎಂಬುದಕ್ಕೆ ಸಂತೆಯಲ್ಲಿದ್ದ ರೈತರು ನೀಡಿದ ಮಾಹಿತಿ ಅಚ್ಚರಿ ಮೂಡಿಸಿತು. ಎತ್ತು ಹಸು ಕರುಗಳು ಸೇರಿದಂತೆ ಜಾನುವಾರು ಖರೀದಿಗೆ ರಾಜ್ಯ ಹಾಗೂ ಅಕ್ಕಪಕ್ಕದ ರಾಜ್ಯಗಳ ಕಸಾಯಿ ಖಾನೆಯವರು ಬಂದು ರೈತರೊಂದಿಗೆ ಪೈಪೋಟಿಗಿಳಿಯುತ್ತಾರೆ. ಖರೀದಿಗೆ ಬಂದ ರೈತರು ಕೇಳಿದ ಬೆಲೆಗಿಂತ ₹ 5 ಸಾವಿರ ₹10 ಸಾವಿರ ಹಣ ಹೆಚ್ಚಿಗೆ ಕೊಡುವುದಾಗಿ ಪುಸಲಾಯಿಸುತ್ತಾರೆ. ಹೀಗಾಗಿ ಸಣ್ಣಪುಟ್ಟ ರೈತರು ಅಷ್ಟೊಂದು ಹಣ ಕೊಟ್ಟು ಖರೀದಿಸಲು ಸಾಧ್ಯವಾಗದಂತಾಗಿದೆ ಎಂದು ನೋವು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.