ಕಲಬುರ್ಗಿ: ‘ಮಾನವ ಹಕ್ಕುಗಳ ರಕ್ಷಣೆಯ ಹೊಣೆಹೊತ್ತಿರುವ ಅಧಿಕಾರಿಗಳಾದ ನಾವು ಮೊದಲು ಮಾನವೀಯ ಗುಣ ಬೆಳೆಸಿಕೊಳ್ಳಬೇಕು. ಸಜ್ಜನರ ಏಳ್ಗೆ ನಮ್ಮ ಆದ್ಯಕರ್ತವ್ಯವಾಗಬೇಕು’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ಹೇಳಿದರು.
ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಧಾರವಾಡದ ಸಾಧನ ಮಾನವ ಹಕ್ಕುಗಳ ಕೇಂದ್ರ, ಗ್ಲೋಬಲ್ ಕನ್ಸರ್ ಇಂಡಿಯಾ, ಮಾನವ ಹಕ್ಕುಗಳ ಆಯೋಗ, ಹಸ್ನ ಸೈಡಲ್ ಫೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಮಹಿಳೆ, ಮಕ್ಕಳು ಮತ್ತು ಪರಿಸರ; ಇವರಿಗೆ ಸೂಕ್ತ ರಕ್ಷಣೆ ನಮ್ಮ ಹೊಣೆ’ ಎಂಬ ವಿಷಯದ ಎರಡು ದಿನಗಳ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಜು ಜಿ.ತೆಗ್ಗೆಳ್ಳಿ, ‘ಆಹಾರದ ಸಂರಕ್ಷಣೆ ಪ್ರತಿಯೊಬ್ಬ ಮಾನವನ ಹಕ್ಕು. ಈ ದಿಸೆಯಲ್ಲಿ ನಮ್ಮ ಸಂಸ್ಥೆ ಹಲವಾರು ಸಂಶೋಧನೆ ನಡೆಸಿದೆ. ಈ ದೇಶದಲ್ಲಿ ಕೃಷಿ ಅಭಿವೃದ್ಧಿಗಾಗಿ ರೈತರ ಆದ್ಯತೆಗಳನ್ನು ಗಮನಿಸಬೇಕು’ ಎಂದರು.
ಸಾವಯವ ಕೃಷಿ ಪಂಡಿತ ಸೋಮನಾಥ ರೆಡ್ಡಿ, ಉತ್ತಮ ಆರೋಗ್ಯಕ್ಕಾಗಿ ಸಾವಯವ ಆಹಾರ ಬಹಳ ಅವಶ್ಯ ಎಂದು ಹೇಳಿದರು. ಬೃಂದಾ ಅವರು ಪರಿಸರ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದರು.
ಡಿವೈಎಸ್ಪಿ ಜೇಮ್ಸ್ ಮಿನೇಜಸ್, ಸಿಪಿಐ ಗಿರೀಶ್,ಪಿಎಸ್ಐ ಚೇತನ್, ಕೆವಿಕೆ ವಿಜ್ಞಾನಿಗಳಾದ ಡಾ.ವಾಸುದೇವ ನಾಯಕ್, ಡಾ.ಮಂಜುನಾಥ ಪಾಟೀಲ, ಡಾ.ಜಹೀರ್ ಅಹಮ್ಮದ್ ಇದ್ದರು. ಡಾ. ಇಸ್ಬಿಲಾ ಝೇವಿಯರ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.