
ಬಂಧನ
(ಸಾಂದರ್ಭಿಕ ಚಿತ್ರ)
ಕಲಬುರಗಿ: ಜಮೀನಿನ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಲು ತಂದೆಯೇ ಮಗಳನ್ನು ಸಾಯಿಸಿ ‘ಎದುರಾಳಿಗಳು ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ’ ಎಂದು ಬಿಂಬಿಸಲು ಯತ್ನಿಸಿದ ಸಂಗತಿ ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿದೆ.
ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮದ ಭಾಗಶಃ ಅಂಗವಿಕಲೆ ಮಂಜುಳಾ ನೀಲೂರ (17) ಶವ ನೇಣುಹಾಕಿದ ಸ್ಥಿತಿಯಲ್ಲಿ ಮನೆಯಲ್ಲೇ ಪತ್ತೆಯಾಗಿತ್ತು. ಶಂಕಾಸ್ಪದ ಸಾವಿನ ತನಿಖೆ ಕೈಗೊಂಡ ಪೊಲೀಸರು, ‘ಬಾಲಕಿ ಸಾವಿಗೆ ತಂದೆಯೇ ಕಾರಣ’ ಎಂಬುದನ್ನು ಪತ್ತೆ ಮಾಡಿದ್ದಾರೆ.
‘ಕೃತ್ಯ ನಡೆದ 24 ಗಂಟೆಗಳಲ್ಲೇ ಪೊಲೀಸರು ಬಂಧಿಸಿದ್ದಾರೆ. ಆರೋಪಿ, ಬಾಲಕಿಯ ತಂದೆ ಗುಂಡೇರಾವ ನೀಲೂರ (42) ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಜಮೀನಿಗೆ ದಾರಿಗೆ ಸಂಬಂಧಿಸಿ ಪಕ್ಕದ ಜಮೀನಿನವರ ಜೊತೆ ಗಲಾಟೆ ನಡೆಯುತ್ತಿತ್ತು. ಪಕ್ಕದ ಜಮೀನಿನವರನ್ನು ಜೈಲಿಗೆ ಕಳುಹಿಸಲು ಗುಂಡೇರಾವ ಸಂಚು ರೂಪಿಸಿದ್ದ. ‘ಬಾಲಕಿಗೆ ಪ್ರಚೋದಿಸಿ ಆತ್ಮಹತ್ಯೆ ಮಾಡಿಸಿದ ಬಳಿಕ ಸ್ಥಳದಿಂದ ಹೊರ ನಡೆದಿದ್ದ. ಕುಟುಂಬದವರು ಫೋನ್ ಮಾಡಿದಾಗ ಏನೂ ಗೊತ್ತಿಲ್ಲದಂತೆ ಮರಳಿದ್ದ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.