ADVERTISEMENT

ಕಲಬುರ್ಗಿ | ಯುವಕನ ಕೊಲೆ; ಜೀವಾವಧಿ ಶಿಕ್ಷೆ

ಪ್ರೇಮ ಪ್ರಕರಣದಲ್ಲಿ ಒಬ್ಬನಿಗೆ ಶಿಕ್ಷೆ, ಇನ್ನೊಬ್ಬ ತಲೆಮರೆಸಿಕೊಂಡಿದ್ದಾನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 9:54 IST
Last Updated 19 ಜುಲೈ 2020, 9:54 IST

ಕಲಬುರ್ಗಿ: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆಯುವಕನನ್ನು ಕೊಲೆ ಮಾಡಿದ ವ್ಯಕ್ತಿಗೆ ಇಲ್ಲಿನ 1ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದ ಶಿವಾನಂದ ಉಪ್ಪಾರ ಶಿಕ್ಷೆಗೆ ಒಳಗಾದವ.

ಆಳಂದ ತಾಲ್ಲೂಕಿನ ಅಂಬಲಗಾ ಗ್ರಾಮದಲ್ಲಿ ಸರ್ದಾರ ತಾಂಬೋಳಿ ಎಂಬ ಯುವಕನನ್ನು ಶಿವಾನಂದ ಉಪ್ಪಾರ ಹಾಗೂ ದಾವಲಸಾಬ್ ಬುರ್ಲೆ ಅಲಿಯಾಸ್ ಹೊಸೂರ ಇಬ್ಬರು ಕೂಡಿಕೊಂಡು ರಾಡ್‍ನಿಂದ ಹೊಡೆದು ಕೊಲೆ ಮಾಡಿದ್ದರು. ತನ್ನ ಸಂಬಂಧಿ ಹುಡುಗಿಯೊಬ್ಬಳನ್ನು ಓಡಿಸಿಕೊಂಡು ಹೋಗಿದ್ದ ಎಂಬ ದ್ವೇಷದಿಂದ ಯುವಕನನ್ನು ಕೊಲೆಗೈದ ಬಗ್ಗೆ ದೂರು ದಾಖಲಾಗಿತ್ತು.

ADVERTISEMENT

ಇಬ್ಬರು ಆರೋಪಿಗಳ ಪೈಕಿಗೆ ಒಬ್ಬನ ಅಪರಾಧ ಸಾಬೀತಾದ್ದರಿಂದ ಶಿಕ್ಷೆ ವಿಧಿಸಲಾಗಿದೆ.

ನಿರಂತರ ಜ್ಯೋತಿ ವಿದ್ಯುತ್ ಕಂಬಗಳ ತಂತಿ ಜೋಡಣೆ ಕೆಲಸಕ್ಕಾಗಿ ಸರ್ದಾರ ಅಂಬಲಗಾ ಗ್ರಾಮಕ್ಕೆ ಹೋಗಿದ್ದ. ಈ ವೇಳೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಕೋಣೆಯಲ್ಲಿ ಸರ್ದಾರ ಒಬ್ಬನೇ ಇದ್ದ ಸಮಯದಲ್ಲಿ, ದಾವಲಸಾಬ್ ಬುರ್ಲೆ ಮತ್ತು ಶಿವಾನಂದ ಉಪ್ಪಾರ ಹೊಡೆದು ಕೊಲೆಗೈದಿದ್ದರು.

ಈ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಳಂದ ಸಿಪಿಐ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸುಕಲಾಕ್ಷ ಪಾಲನ್ ಪ್ರಕರಣದ ಎರಡನೇ ಆರೋಪಿಯಾದ ಶಿವಾನಂದನಿಗೆ ಜೀವಾಧಿವ ಶಿಕ್ಷೆ ವಿಧಿಸಿದ್ದಾರೆ.

ಕೊಲೆಯ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಾವಲಸಾಬ್ ಬುರ್ಲೆ ಘಟನೆ ನಡೆದ ದಿನದಿಂದಲೂ ತಲೆ ಮರೆಸಿಕೊಂಡಿದ್ದಾನೆ.

ಸರ್ಕಾರದ ಪರವಾಗಿ 1ನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಎಸ್.ಆರ್.ನರಸಿಂಹಲು ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.