ADVERTISEMENT

ಲಿಂಗಾಯತರಿಗೆ 2ಎ ಮೀಸಲಾತಿಗೆ ಒತ್ತಾಯ

‘ಕೊಟ್ಟ ಮಾತು ನೆನಪಿಸೋಣ- ಮೀಸಲಾತಿ ಪಡೆಯೋಣ’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 14:13 IST
Last Updated 15 ಸೆಪ್ಟೆಂಬರ್ 2021, 14:13 IST
ಚಿಂಚೋಳಿಯಲ್ಲಿ ಅಖಿಲ ಭಾರತ ಲಿಂಗಾಯತ ಮೀಸಲಾತಿ ಹಕ್ಕೊತ್ತಾಯ ವೇದಿಕೆ ವತಿಯಿಂದ ಲಿಂಗಾಯತರಿಗೆ 2ಎ ಮೀಸಲಾತಿಗೆ ಆಗ್ರಹಿಸಿ ಬುಧವಾರ ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದರು
ಚಿಂಚೋಳಿಯಲ್ಲಿ ಅಖಿಲ ಭಾರತ ಲಿಂಗಾಯತ ಮೀಸಲಾತಿ ಹಕ್ಕೊತ್ತಾಯ ವೇದಿಕೆ ವತಿಯಿಂದ ಲಿಂಗಾಯತರಿಗೆ 2ಎ ಮೀಸಲಾತಿಗೆ ಆಗ್ರಹಿಸಿ ಬುಧವಾರ ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದರು   

ಚಿಂಚೋಳಿ: ಲಿಂಗಾಯತ ಪಂಚಮಸಾಲಿ ಹಾಗೂ ಉಪನಾಮಗಳಾದ ದೀಕ್ಷ ಲಿಂಗಾಯತ, ಗೌಡ ಲಿಂಗಾಯತ, ಮಲೆಗೌಡ ಲಿಂಗಾಯತ ಸೇರಿದಂತೆ ಇನ್ನಿತರ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕೊಡಬೇಕೆಂದು ಒತ್ತಾಯಿಸಿ ಬುಧವಾರ ಅಖಿಲ ಭಾರತ ಲಿಂಗಾಯತ ಮೀಸಲಾತಿ ಹಕ್ಕೊತ್ತಾಯ ವೇದಿಕೆ ಮುಖಂಡರು ಇಲ್ಲಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಲಿಂಗಾಯತರು ಹಾಗೂ ಉಪನಾಮಗಳ ಲಿಂಗಾಯತರಿಗೆ 2ಎ ಮೀಸಲಾತಿ ನೀಡಬೇಕೆಂದು ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ 23 ದಿನಗಳ ಕಾಲ ಧರಣಿ ನಡೆಸಿದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 6 ತಿಂಗಳು ಸಮಯಾವಕಾಶ ಕೋರಿದ್ದರು. ಅದರಂತೆ ಸರ್ಕಾರ ಕೇಳಿದ 6 ತಿಂಗಳ ಸಮಯಾವಕಾಶ ಇಂದಿಗೆ ಸೆ.15ಕ್ಕೆ ಮುಗಿದಿದ್ದು, ‘ಕೊಟ್ಟ ಮಾತು ನೆನಪಿಸೋಣ ಹಾಗೂ ಮೀಸಲಾತಿ ಪಡೆಯೋಣ ಅಭಿಯಾನ’ ರಾಜ್ಯದಾದ್ಯಂತ ನಡೆಸಲಾಗುತ್ತಿದ ಎಂದು ವೇದಿಕೆ ಸಂಚಾಲಕ ಶರಣುಪಾಟೀಲ ಮೋತಕಪಳ್ಳಿ ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಚಿತ್ರಶೇಖರ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಲಾಮೂರ ಮಾತನಾಡಿ, ಲಿಂಗಾಯತರಿಗೆ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ಮತ್ತು ವೃತ್ತಿ ಶಿಕ್ಷಣ ಹಾಗೂ ನವೋದಯ ಶಾಲೆ ಪ್ರವೇಶದಲ್ಲಿ ಅನ್ಯಾಯವಾಗುತ್ತಿದೆ. ಪ್ರಯುಕ್ತ ಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಈಚೆಗೆ ನೀಡಿದ್ದರಿಂದ ಮುಖ್ಯಮಂತ್ರಿಗಳು ಲಿಂಗಾಯತ ಹಾಗೂ ಉಪನಾಮಗಳಿಗೆ 2ಎ ಮೀಸಲಾತಿ ಘೋಷಿಸಬೇಕೆಂದು ಒತ್ತಾಯಿಸಿದರು.

ADVERTISEMENT

ಮುಖಂಡರಾದ ನಾಗಶೆಟ್ಟಿ ಕಾಳಗಿ, ಸೂರ್ಯಕಾಂತ ಹುಲಿ, ವಿಶ್ವನಾಥ ದೇಶಮುಖ್, ನೀಲಕಂಠ ಸೀಳಿನ್, ಆನಂದ ಹಿತ್ತಲ್, ಸುರೇಶ ದೇಶಪಾಂಡೆ, ಉದಯಕುಮಾರ ಪಾಟೀಲ, ಚನ್ನಶೆಟ್ಟಿ ಪಾಟೀಲ, ರಾಜು ಮುಸ್ತಾರಿ, ರಾಜಶೇಖರ ಹಿತ್ತಲ್, ಸುಭಾನರೆಡ್ಡಿ ಶೇರಿಕಾರ, ಸೂರ್ಯಕಾಂತ ಚಿಂಚೋಳಿಕರ್, ನಾಗರಾಜ ಮಲಕೂಡ, ಸುರೇಶ ಬೆಟಗೇರಿ, ರಾಜು ಪಟಪಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.