ಕಲಬುರಗಿ: ಔಷಧ ವಿತರಕರೊಬ್ಬರಿಗೆ ಬಿಲ್ ಪಾವತಿಸಲು ಲಂಚಕ್ಕೆ ಬೇಡಿಕೆ ಇಟ್ಟು, ₹ 5 ಸಾವಿರ ಹಣ ಪಡೆಯುತ್ತಿದ್ದ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್)ಯ ಫಾರ್ಮಸಿ ವಿಭಾಗದ ಸಹಾಯಕ ನಿರ್ದೇಶಕ ವರಶಂಕರ ಅಮರಶೆಟ್ಟಿ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಗ್ರೀನ್ ಫಾರ್ಮಾ ಔಷಧಿ ಕಂಪನಿಯ ಮ್ಯಾನೇಜರ್ ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮದ ತಿರುಪತಿ ವೆಂಕಣ್ಣ ಬೊಜ್ಜ ಎಂಬುವವರು ನಾಯಿ ಕಡಿತಕ್ಕೆ ಔಷಧಿ ಪೂರೈಸಿದ್ದರು. ₹ 1.60 ಲಕ್ಷ ಮೌಲ್ಯದ ಬಿಲ್ ಮಂಜೂರು ಮಾಡಲು ವರಶಂಕರ ₹ 5 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ತಿರುಪತಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಶನಿವಾರ ಸಂಜೆ 4.10ಕ್ಕೆ ಲಂಚದ ಹಣ ಪಡೆಯುವಾಗಲೇ ಲೋಕಾಯುಕ್ತ ಎಸ್ಪಿ ಎ.ಆರ್. ಕರ್ನೂಲ್ ನೇತೃತ್ವದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ ಕೆ. ಗಂಗಲ್ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಧೃವತಾರಾ ಅವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.