
ಶಿವಲಿಂಗಪ್ಪ
ಕಲಬುರಗಿ: ನಿವೃತ್ತ ಶಿಕ್ಷಕಿಯೊಬ್ಬರ ಪಿಂಚಣಿ ಹಾಗೂ ಇತರೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ಕುರಿತ ಕಡತವನ್ನು ಮುಂದೆ ಕಳುಹಿಸಲು ₹28,500 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸೇಡಂ ಬಿಇಒ ಕಚೇರಿಯ ಎಫ್ಡಿಸಿ ಶಿವಲಿಂಗಪ್ಪ ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ರಜಾಕ್ ಬೇಗಂ ಅವರು ಸೇಡಂ ತಾಲ್ಲೂಕಿನ ಲಿಂಗಂಪಲ್ಲಿಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ ಒಂದು ವರ್ಷದ ಹಿಂದೆಯೇ ನಿವೃತ್ತರಾಗಿದ್ದರು. ಅವರ ಪಿಂಚಣಿ ಹಣ ಹಾಗೂ ಇತರೆ ಸರ್ಕಾರಿ ಸೌಲಭ್ಯಗಳನ್ನು ಲೆಕ್ಕಹಾಕಿ ಕಡತ ಕಳುಹಿಸಲು ಶಿವಲಿಂಗಪ್ಪ ₹28,500 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಲ್ಲಿ ಯುಪಿಐ ಮೂಲಕ ಮುಂಗಡವಾಗಿ ₹15 ಸಾವಿರ ಪಡೆದಿದ್ದರು.
ಈ ಸಂಬಂಧ ರಜಾಕ್ಬೇಗಂ ಅವರ ಪುತ್ರ ಅಫ್ರಿದಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಶಿವಲಿಂಗಪ್ಪ ಗುರುವಾರ ₹10 ಸಾವಿರ ಹಣವನ್ನು ಯುಪಿಐ ಮೂಲಕ ಪಡೆದಾಗ ಕಲಬುರಗಿಯ ಲೋಕಾಯುಕ್ತ ಎಸ್ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಇನ್ಸ್ಪೆಕ್ಟರ್ ಅರುಣಕುಮಾರ ಮುರಗುಂಡಿ ಅವರ ತಂಡವು ಆರೋಪಿಯನ್ನು ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.