ಕಲಬುರಗಿ: ‘ಸಿದ್ದರಾಮಯ್ಯ ಉದ್ರಿ ಮಾತು ಸಾಕಯ್ಯ, ಹೆಸರಿಗೆ ಮಾತ್ರ ಎಸ್ಸಿ ಪಟ್ಟಿ, ಸಿಕ್ಕಿದ್ದು ಖಾರಾ ರೊಟ್ಟಿ, ಜನಸಂಖ್ಯೆಯಲ್ಲಿ ನಾವೇ ಮುಂದು, ತುಳೀತಿರಲ್ಲ ಹಿಂದು ಮುಂದು, ಮಾದಿಗರೆದ್ದಾರೋ ರೋಸಿ ಸೀದಾ ರೋಡಿಗೆ ಬಂದಾರೋ’..
ಇವು ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಿ ಮಾದಿಗ ಮಹಾ ಒಕ್ಕೂಟದಿಂದ ಶುಕ್ರವಾರ ನಡೆದ ಅರೆಬೆತ್ತಲೆ ಪ್ರತಿಭಟನೆ ವೇಳೆ ಕೇಳಿ ಬಂದ ಆಕ್ರೋಶದ ನುಡಿಗಳು.
ಒಳಮೀಸಲಾತಿ ಜಾರಿಯ ಅಧಿಕಾರವನ್ನು ಸುಪ್ರೀಂಕೋರ್ಟ್ ರಾಜ್ಯಸರ್ಕಾರಗಳಿಗೆ ನೀಡಿ ಆ.1ಕ್ಕೆ ಒಂದು ವರ್ಷ ಪೂರ್ಣವಾಗಿದೆ. ವರ್ಷ ಕಳೆದರೂ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡುತ್ತಿಲ್ಲ ಎಂದು ಆಕ್ರೋಶಗೊಂಡ ಮಾದಿಗ ಸಮುದಾಯದವರು ಶುಕ್ರವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಗತ್ ವೃತ್ತದಿಂದ ಹೊರಟ ಮಾದಿಗ ಸಮುದಾಯದವರ ಅರೆಬೆತ್ತಲೆ ಪ್ರತಿಭಟನಾ ಜಾಥಾ ಸರ್ದಾರ್ ವಲ್ಲಭಬಾಯ್ ವೃತ್ತ ಬಳಸಿ ಮರಳಿ ಜಿಲ್ಲಾಧಿಕಾರಿಯತ್ತ ತೆರಳಿ ನಡುರಸ್ತೆಯಲ್ಲೇ ಧರಣಿ ಕುಳಿತರು. ಈ ವೇಳೆ ಮಾತನಾಡಿದ ಮುಖಂಡರು, ‘ಆ.10ರೊಳಗೆ ಒಳಮೀಸಲಾತಿ ಜಾರಿ ಮಾಡಿ ಇಲ್ಲದಿದ್ದರೆ ಕುರ್ಚಿ ಬಿಟ್ಟು ಕೆಳಗಿಳಿಯಿರಿ’ ಎಂದು ಆಗ್ರಹಿಸಿದರು.
‘ಪರಿಶಿಷ್ಟ ಜಾತಿಗಳೊಳಗೇ ಮಾದಿಗ ಸಮುದಾಯ ಅತಿ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯವಾಗಿದೆ. ಒಳಮೀಸಲಾತಿಯ ಬೇಡಿಕೆ ಸುಮಾರು 35 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಸುಪ್ರೀಂಕೋರ್ಟ್ ಆದೇಶದ ತರುವಾಯ ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯ ಸರ್ಕಾರಗಳು ಒಳಮೀಸಲಾತಿ ಜಾರಿ ಮಾಡಿವೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಮೀನಮೇಷ ಎಣಿಸುತ್ತಿರುವುದು ಮಾದಿಗ ಸಮುದಾಯದ ಜನಾಕ್ರೋಶಕ್ಕೆ ಕಾರಣವಾಗಿದೆ’ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಶ್ಯಾಮ ನಾಟಿಕರ್, ಎ.ಎಚ್.ನಾಗೇಶ, ರಾಜು ವಾಡೇಕರ್, ಪರಮೇಶ್ವರ್ ಖಾನಾಪುರ, ಲಿಂಗರಾಜ್ ತಾರಫೈಲ್, ರಮೇಶ ವಾಡೇಕರ್, ದಶರಥ ಕಲಗುರ್ತಿ, ಮಲ್ಲಿಕಾರ್ಜುನ ನಾಲವಾರಕರ್, ಮಲ್ಲಿಕಾರ್ಜುನ ಜಿನಿಕೇರಿ, ವಿಜಯಕುಮಾರ ಆಡಕಿ, ಮಲ್ಲಪ್ಪ ಮಾದರ್, ರಾಜು ಮುಕ್ಕಣ್ಣ, ಸತೀಶ್ ಅಳ್ಳಳ್ಳಿ, ಅರುಂಧತಿ, ರಾಜು ಕಟ್ಟಿಮನಿ, ಪ್ರಲ್ಹಾದ ಹಡಗಿಲ್, ರಾಜು ಹದನೂರು, ಮಂಜುನಾಥ ಲೆಂಗಟಿ, ಅಮೃತ ಸಾಗರ, ಕಾಶಿನಾಥ ನಂದೂರ ಸೇರಿದಂತೆ ಸಮುದಾಯದ ನೂರಾರು ಜನ ಭಾಗಿಯಾಗಿದ್ದರು.
ಒಳಮೀಸಲಾತಿ ಜಾರಿಗಾಗಿ ರಸ್ತೆಗಿಳಿದ ಸಮುದಾಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ರಸ್ತೆಯಲ್ಲೇ ಧರಣಿ; ವಾಹನ ಸಂಚಾರ ಅಸ್ತವ್ಯಸ್ತ
ಒಳಮೀಸಲಾತಿ ಜಾರಿಯಾಗುವವರೆಗೂ ಯಾವುದೇ ಸರ್ಕಾರಿ ನೇಮಕಾತಿಗಳು ನಡೆಯಲ್ಲ. ರಾಜ್ಯ ಸರ್ಕಾರ ಶೀಘ್ರ ಒಳಮೀಸಲಾತಿ ಜಾರಿ ಮಾಡಬೇಕು
-ಶಶೀಲ್ ಜಿ.ನಮೋಶಿ ವಿಧಾನ ಪರಿಷತ್ ಸದಸ್ಯ
ಆ.10ರೊಳಗೆ ಒಳಮೀಸಲಾತಿ ಜಾರಿಯಾಗಬೇಕು. ಇಲ್ಲದಿದ್ದರೆ ಆ.11ರಿಂದ ವಿಧಾನಮಂಡಲದ ಕಲಾಪ ನಡೆಯಲಿದ್ದು ನಾವು ವಿಧಾನಸೌಧಕ್ಕೆ ಬೀಗ ಹಾಕುತ್ತೇವೆ
- ಸುಭಾಷ್ ದೊಡ್ಡಮನಿ ಮಾದಿಗ ಸಮಾಜದ ಮುಖಂಡ
ಸಚಿವರಿಗೆ ಮುತ್ತಿಗೆ ಕಪ್ಪುಬಟ್ಟೆ ಪ್ರದರ್ಶನ ‘ಆ.10ರೊಳಗೆ ಒಳಮೀಸಲಾತಿ ಜಾರಿಯಾಗದಿದ್ದರೆ ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ಮಾಡದಂತೆ ಮುತ್ತಿಗೆ ಹಾಕುತ್ತೇವೆ. ಕಪ್ಪು ಬಟ್ಟೆ ಪ್ರದರ್ಶಿಸುತ್ತೇವೆ’ ಎಂದು ಮಾದಿಗ ಸಮುದಾಯದ ಮುಖಂಡರು ಹೇಳಿದರು.
ಮಾದಿಗ ಸಮನ್ವಯ ಸಮಿತಿಯಿಂದ ಧರಣಿ ಜಿಲ್ಲಾ ಮಾದಿಗ ಸಮಾಜದ ವಿವಿಧ ಸಂಘಟನೆಗಳ ಒಳ ಮೀಸಲಾತಿ ಹೋರಾಟ ಸಮಿತಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಧರಣಿ ನಡೆಸಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ಆಯೋಗದ ವರದಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಧರಣಿಯಲ್ಲಿ ಮಲ್ಲಿಕಾರ್ಜುನ ಚಟ್ನಳ್ಳಿ ಚಂದ್ರಕಾಂತ ನಾಟಿಕಾರ ಬಸವರಾಜ ಜವಳಿ ಶಿವಕುಮಾರ ಆಜಾದಪೂರ ಸುಂದರ ಡಿ. ಸಾಗರ ಲಕ್ಕಪ್ಪ ಎಸ್. ಜವಳಿ ರಮಾಕಾಂತ ವಿ.ಪೂಜಾರಿ ದಶರಥ ಕಲಗುರ್ತಿ ಜಯದೇವಿ ಹೆಗಡೆ ಜಾನಪ್ಪ ಶಿವನೂರ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.