ಚಿಂಚೋಳಿ: ತಾಲ್ಲೂಕಿನ ಸುಲೇಪೇಟ ಗ್ರಾಮದ ಚಾರಿತ್ರಿಕ ಹಿನ್ನೆಲೆಯಿರುವ ಮಹಾಂತೇಶ್ವರ ಮಠದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದ್ದು, ಭಾನುವಾರ ಗ್ರಾನೈಟ್ ಬಾಗಿಲನ್ನು ಜೋಡಿಸಲಾಯಿತು.
ಈ ಸಂಬಂಧ ಶ್ರೀಮಠದ ಉಸ್ತುವಾರಿ ವಹಿಸಿರುವ ಪಂಪಾಪತಿ ದೇವರು ಮಾತನಾಡಿ, ಮಹಾಂತೇಶ್ವರ ಮಠವು, ಸುಮಾರು ಐದು ಶತಮಾನಗಳಷ್ಟು, ಇತಿಹಾಸ ಹೊಂದಿದೆ. ಕಾಳಗಿ ತಾಲ್ಲೂಕಿನ ಕೋಡ್ಲಿಯಲ್ಲಿ ಜನಿಸಿದ ಮಹಾಂತೇಶ್ವರರು, ಸುಲೇಪೇಟ ಸೇರಿ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ 1001 ಮಠಗಳನ್ನು ಸ್ಥಾಪಿಸಿದ್ದಾರೆ. ಸಾವಿರ ದೇವರ ಸಂಸ್ಥಾನದ ಮಹಾಂತೇಶ್ವರ ಮಠವನ್ನು ಪೀಠಾಧಿಪತಿ ವೀರಭದ್ರ ಶಿವಾಚಾರ್ಯರ ನೇತೃತ್ವದಲ್ಲಿ ಹೊಸ ದಾಗಿ ನಿರ್ಮಿಸಲಾಗುತ್ತಿದೆ ಎಂದರು.
ಕರ್ತೃ ಗದ್ದುಗೆ, ಸುಸಜ್ಜಿತ ಗುರು ನಿವಾಸ ಹಾಗೂ ಸುಸಜ್ಜಿತ ಭಕ್ತರ ವಿಶ್ರಾಂತಿ ಕೊಠಡಿಗಳು ಹಾಗೂ ಸಾವಿರಾರು ಮಂದಿ ಕುಳಿತು ಪ್ರವಚನ, ಸತ್ಸಂಗ ನಡೆಸುವ ದೊಡ್ಡ ಸಭಾಂಗಣ ನಿರ್ಮಿಸಲಾಗಿದೆ. ಇದು ಮದುವೆ ಸೇರಿದಂತೆ ಶುಭ ಕಾರ್ಯಗಳನ್ನು ಕೈಗೊಳ್ಳಲು ಉಪಯೋಗವಾಗಲಿದೆ. ಒಟ್ಟು 8 ಕೊಠಡಿಗಳು ಹಾಗೂ ಸಭಾಂಗ ಣ ಶ್ರೀಮಠ ಒಳಗೊಂಡಿದ್ದು, ಸುಮಾರು 11 ಸಾವಿರ ಚದರ ಅಡಿ ವಿಸ್ತಾರದಲ್ಲಿ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ಸುಮಾರು 2 ಕೋಟಿ ವೆಚ್ಚ ತಗುಲುವ ಅಂದಾಜಿದೆ ಎಂದು ತಿಳಿಸಿದರು.
ಈಗಾಗಲೇ ಬುನಾದಿ, ಕಾಲಂ, ಛತ್ತು ಹಾಗೂ ಗೋಡೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಅಂತಿಮ ಹಂತದ ಕೆಲಸಗಳು ಮಾತ್ರ ಬಾಕಿಯಿವೆ. ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಒಂದು ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗಿದೆ. ಉಳಿದ ಕಾಮಗಾರಿ ತೀವ್ರಗತಿಯಲ್ಲಿ ಸಾಗಿದೆ. ಶ್ರೀಮಠದ ಮಹಾದ್ವಾರ ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲಾಗಿದ್ದು ಭಕ್ತರನ್ನು ಆಕರ್ಷಿಸುತ್ತಿದೆ ಎಂದರು.
ದ್ವಾರ ಬಾಗಿಲು ಪ್ರತಿಷ್ಠಾಪನೆ: ಶ್ರೀಮಠದ ಮಹಾದ್ವಾರ ಶನಿವಾರ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲಾಯಿತು. 10x10 ಅಡಿ ಅಳತೆಯ ದ್ವಾರ ಬಾಗಿಲಲ್ಲಿ ದ್ವಾರಪಾಲಕರು, ರೇಣುಕಾರ್ಯರು ಹಾಗೂ ಇತರರ ಮೂರ್ತಿಗಳನ್ನು ಕೆತ್ತಲಾಗಿದೆ. ಪೂಜೆ ಸಂದರ್ಭದಲ್ಲಿ ಪಂಪಾಪತಿ ದೇವರು, ಚನ್ನಬಸಯ್ಯ ಸ್ವಾಮಿ, ಬಸವರಾಜ ಬಿ. ಸಜ್ಜನಶೆಟ್ಟಿ, ಸುಭಾಷ ದಬ್ಬಾ, ಅರವಿಂದ ಬಸುದೆ, ಅರ್ಜುನ ತಳವಾರ, ಜಗದೀಶ್ವರಯ್ಯ ಪತ್ರಿ, ನಾಗಣ್ಣ ನಿಡಗುಂದಿ ಸೇರಿ ಹಲವು ಭಕ್ತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.