ಶ್ರೀಜಯತೀರ್ಥ ವೇದಿಕೆ, ಮಳಖೇಡ (ಕಲಬುರಗಿ ಜಿಲ್ಲೆ): ಇಲ್ಲಿನ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ಆಯೋಜಿಸಿರುವ ‘ಶ್ರೀಮನ್ನ್ಯಾಯಸುಧಾ ಮಂಗಳ ಮಹೋತ್ಸವ’ದ ಎರಡನೇ ದಿನವಾದ ಶುಕ್ರವಾರ, ಅಧ್ಯಾತ್ಮ ಮಂಥನ ಹಾಗೂ ಸುಧಾನುವಾದ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಒಂದೇ ವೇದಿಕೆಯಲ್ಲಿ ಸಮಾಗಮವಾದರು.
ನಸುಕಿನ 4.30ಕ್ಕೆ ನಿಗದಿಯಾದ ಮಹೂರ್ತದಂತೆ ಕಾಗಿಣಾ ನದಿಯಲ್ಲಿ ಅವಗಾಹನ ಸ್ನಾನ ಮುಗಿಸಿದ ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥರು ಜಯತೀರ್ಥರ ಮೂಲ ವೃಂದಾವನಕ್ಕೆ ನಿರ್ಮಾಲ್ಯ ಅಭಿಷೇಕ ಪೂರೈಸಿದರು.
ಬೆಳಿಗ್ಗೆ 7 ಗಂಟೆಗೆ ಮೂಲ ಪಟ್ಟದ್ದೇವರ ಪೂಜೆ, ಸೀತಾ ಸಮೇತ ರಾಮ ದೇವರ ಪೂಜೆಯನ್ನು ಬಂಗಾರದ ಮತ್ತು ವಜ್ರ ಮಂಟಪದಲ್ಲಿ ನೆರವೇರಿಸಿದರು.
ನಂತರ ಆರಂಭವಾದ ಎರಡನೇ ದಿನದ ಸುಧಾನುವಾದ ವೇದಿಕೆಯಲ್ಲಿ ಸುಬ್ರಹ್ಮಣ್ಯದ ಮಠಾಧೀಶರಾದ ವಿದ್ಯಾಪ್ರಸನ್ನ ತೀರ್ಥರು, ಪಲಿಮಾರು ಮಠದ ಪೀಠಾಧಿಪತಿ ವಿದ್ಯಾಧೀಶ ತೀರ್ಥರು, ಉತ್ತರಾದಿ ಮಠದ ಸತ್ಯಾತ್ಮ ತೀರ್ಥರು, ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥರು, ಕೂಡ್ಲಿಯ ಆರ್ಯ ಅಕ್ಷೋಭ್ಯ ತೀರ್ಥರ ಮಠಾಧಿಪತಿ ರಘುವಿಜಯ ತೀರ್ಥರು ನೇತೃತ್ವ ವಹಿಸಿದರು.
ವಿವಿಧ ವಿದ್ಯಾಪೀಠಗಳಿಂದ ಬಂದ ವಿದ್ವಾಂಸರು, ವಿದ್ಯಾರ್ಥಿಗಳು, ದೇಶದಾದ್ಯಂತ ಹರಡಿರುವ ಉತ್ತರಾದಿ ಮಠದ ಶಿಷ್ಯರು, ಮಹಿಳೆಯರು, ಮಕ್ಕಳು ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.