ಪ್ರಜಾವಾಣಿ ವಾರ್ತೆ
ಜೇವರ್ಗಿ: ‘ಕಳೆದ 3-4 ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮಲ್ಲಾಬಾದ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಟೆಂಡರ್ ಪ್ರಕಟಣೆ ಹೊರಡಿಸಿದ್ದು, ದಶಕಗಳ ಕನಸು ನನಸಾಗುತ್ತಿರುವುದು ಹೆಮ್ಮೆಯ, ಗೌರವದ ಅಭಿವೃದ್ಧಿಯ ಸಂಕೇತವಾಗಿದೆ’ ಎಂದು ಏತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಡಾ.ಮಹೇಶ ರಾಠೋಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ‘ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕೆಲಸ ಆಗುವಂತೆ ಪ್ರಯತ್ನಿಸಿದ ಶಾಸಕ ಡಾ. ಅಜಯಸಿಂಗ್ ಕಾರ್ಯ ಶ್ಲಾಘನೀಯ. ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನ 48 ಗ್ರಾಮಗಳ ರೈತರ ಬದುಕು ಹಸನಾಗಿಸುವ ಮಹತ್ವದ ಯೋಜನೆಯ ಟೆಂಡರ್ ಕರೆದಿರುವದು ಹೋರಾಟಕ್ಕೆ ಸಿಕ್ಕ ಒಂದು ಹಂತದ ಯಶಸ್ಸು ಆಗಿದೆ. ಆದರೆ, ಈ ಯೋಜನೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆಯದಂತೆ, ಅವ್ಯವಹಾರ ನಡೆಯದಂತೆ ತಡೆಯುವುದು ನಮ್ಮ ಮುಂದಿರುವ ಜವಾಬ್ದಾರಿಯಾಗಿದ್ದು, ಅದಕ್ಕಾಗಿ ಮಲ್ಲಾಬಾದ ಏತ ನೀರಾವರಿ ರೈತ ಹೋರಾಟ ಸಮಿತಿಯು ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತದೆ’ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಬಾಬು ಪಾಟೀಲ ಮುತ್ತಕೋಡ, ಇಬ್ರಾಹಿಂ ಪಟೇಲ್ ಯಾಳವಾರ, ರಾಜಾ ಪಟೇಲ್, ಗುರುನಾಥ ಸಾಹು ರಾಜವಾಳ, ಅಲ್ಲಾ ಪಟೇಲ್ ಇಜೇರಿ, ಮಹಮ್ಮದ ಚೌಧರಿ, ಶಾಂತಯ್ಯ ಗುತ್ತೇದಾರ, ನಿಂಗಪ್ಪ ಪೂಜಾರಿ ಯಾಳವಾರ್, ಅಜೀಜ್ ಪಟೇಲ್, ಬಿ. ಹೆಚ್. ಮಾಲಿಪಾಟೀಲ, ಶರಣು ದೊಡ್ಡಮನಿ, ಮಹಿಬೂಬ್ ಮೌಲಾನ್, ಸಿದ್ರಾಮ ಕಟ್ಟಿ, ಶಾಹಿದ್ ಪಟೇಲ್, ಮಲ್ಲಣ್ಣ ತಳವಾರ, ಶಾಬುದ್ದಿನ ಕುಕನೂರ ಸೇರಿದಂತೆ ಹಲವು ರೈತರು ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.