ಕಲಬುರಗಿ: ವಿಪರೀತ ಸಾಲ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ದಂಪತಿ ಮಧ್ಯೆ ನಡೆದ ಜಗಳದಲ್ಲಿ ಪತಿಯು ವಿಷ ಸೇವಿಸಿ ಮೃತಪಟ್ಟಿದ್ದಾರೆ.
ಪತ್ನಿ ವಿಷ ಸೇವಿಸಿದ್ದಾರೆಂದು ಭಾವಿಸಿ ಪತಿ ವಿಷ ಸೇವಿಸಿದರು. ಘಟನೆಯಲ್ಲಿ ಬಸವರಾಜ ಅಚ್ಚಕೇರಿ (32) ಮೃತಪಟ್ಟರೆ, ಪತ್ನಿ ಗೀತಾ (29) ಬದುಕುಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘ತಾಲ್ಲೂಕಿನ ಸಿರನೂರ ಗ್ರಾಮದಲ್ಲಿ ವಾಸವಿದ್ದ ದಂಪತಿ ಸಾಲದ ವಿಷಯದಲ್ಲಿ ಆಗಾಗ್ಗೆ ಜಗಳವಾಡುತ್ತಿದ್ದರು. ಕೃಷಿಗಾಗಿ ಬಸವರಾಜ ₹ 5 ಲಕ್ಷ ಸಾಲ ಮಾಡಿಕೊಂಡಿದ್ದರು. ಈಚೆಗೆ ಸುರಿದ ಮಳೆಯಿಂದ ಬೆಳೆ ಹಾಳಾಗಿತ್ತು. ಇದರಿಂದ ಪತಿಯ ಜೊತೆ ಜಗಳ ತಾರಕಕ್ಕೇರಿ ಪತ್ನಿ ಗೀತಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಪತ್ನಿ ವಿಷ ಸೇವಿಸಿ ಆಸ್ಪತ್ರೆ ಸೇರಿರುವ ವಿಚಾರ ಅರಿತು ಬಸವರಾಜ ಆತಂಕಗೊಂಡು ವಿಷ ಸೇವಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆಯೇ ಮೃತಪಟ್ಟರು. ಗೀತಾ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.