ADVERTISEMENT

ಅಣವಾರ– ಐನೋಳ್ಳ: ಜನಸಂಪರ್ಕ ಸಭೆ

ಅಹವಾಲು ಆಲಿಸಿದ ಶಾಸಕ ಡಾ.ಅವಿನಾಶ ಜಾಧವ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 8:40 IST
Last Updated 11 ಫೆಬ್ರುವರಿ 2020, 8:40 IST
ಚಿಂಚೋಳಿ ತಾಲ್ಲೂಕು ಅಣವಾರದಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಮದ ಮುಖಂಡ ನಾಗಿಂದ್ರಪ್ಪ ಬಿರಾದಾರ ಮಾತನಾಡಿದರು
ಚಿಂಚೋಳಿ ತಾಲ್ಲೂಕು ಅಣವಾರದಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಮದ ಮುಖಂಡ ನಾಗಿಂದ್ರಪ್ಪ ಬಿರಾದಾರ ಮಾತನಾಡಿದರು   

ಚಿಂಚೋಳಿ: ತಾಲ್ಲೂಕಿನ ಅಣವಾರ ಮತ್ತು ಐನೋಳ್ಳಿ ಗ್ರಾಮದಲ್ಲಿಶಾಸಕ ಡಾ.ಅವಿನಾಶ ಜಾಧವ ಅವರು ಸೋಮವಾರ ಜನ ಸಂಪರ್ಕ ಸಭೆ ನಡೆಸಿದರು.

ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಗ್ರಾಮಗಳಿಗೆ ಕರೆದೊಯ್ದ ಶಾಸಕರು, ಅವರ ಸಮ್ಮುಖದಲ್ಲಿಯೇ ಬೆಳಿಗ್ಗೆ ಅಣವಾರ ಮತ್ತು ಮಧ್ಯಾಹ್ನ ಐನೋಳ್ಳಿಯಲ್ಲಿ ಜನರ ಅಹವಾಲು ಆಲಿಸಿದರು.

ಅಣವಾರ ಗ್ರಾಮದಲ್ಲಿ ಸಾಮೂಹಿಕ ಶೌಚಾಲಯ ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರಿಂದ ದೂರುಗಳು ಬಂದವು. ನಿರ್ವಹಣೆ ಇಲ್ಲದೆ ನಲ್ಲಿಗಳಲ್ಲಿ ನೀರು ಪೋಲಾಗುತ್ತಿದೆ. ನೀರು ಬಂದ್‌ ಮಾಡುವ ವ್ಯವಸ್ಥೆಯೇ ಇಲ್ಲ ಎಂದು ಜನರು ದೂರಿದರು.

ADVERTISEMENT

ಗಂಗನಪಳ್ಳಿ ಗ್ರಾಮದ ಹೊಸ ಬಡಾವಣೆಗೆ ವಿದ್ಯುತ್‌ ಸೌಲಭ್ಯವಿಲ್ಲ. ವಿದ್ಯುತ್‌ ಸೌಲಭ್ಯ ಕಲ್ಪಿಸುವಂತೆ ನಿವಾಸಿಗಳು ಶಾಸಕರಿಗೆ ಮನವಿ ಮಾಡಿದರು.

ಅಣವಾರ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಎಲ್ಲೆಂದರಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಮನೆ ಇಲ್ಲದ ಬಡವರಿಗೆ 4 ಎಕರೆ ಜಮೀನಿನಲ್ಲಿ ಲೇಔಟ್‌ ನಿರ್ಮಿಸಿ ಮನೆಗಳನ್ನು ಮಂಜೂರು ಮಾಡಿಸಬೇಕೆಂದು ಸ್ಥಳೀಯರು ಬೇಡಿಕೆ ಸಲ್ಲಿಸಿದರು.

ನರೇಗಾ ಅಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಹಣ ಬಂದಿಲ್ಲ. ಸರ್ಕಾರಿ ಯೋಜನೆಗಳಲ್ಲಿ ಮನೆ ನಿರ್ಮಿಸಿಕೊಂಡ ಬಡವರಿಗೆ ಮನೆಗಳ ಬಿಲ್‌ ಬಂದಿಲ್ಲ. ಐನೋಳ್ಳಿಯಲ್ಲಿ ವಿದ್ಯುತ್‌ ತಂತಿಗಳು ಜೋತು ಬಿದ್ದಿದ್ದು, ಸರಿಪಡಿಸುವುದು ಹಾಗೂ ದೇಗಲಮಡಿ ಗ್ರಾಸ್‌ನಿಂದ ಐನೋಳ್ಳಿಯ ಬಸವಜ್ಯೋತಿ ಶಾಲೆಯವರೆಗೆ ರಸ್ತೆ ವಿಸ್ತರಣೆ ಮಾಡಿ ವಿಭಜಕ ನಿರ್ಮಿಸಿ ವಿದ್ಯುದ್ದಿಕರಣ ಕೈಗೊಳ್ಳಬೇಕೆಂದು ಸ್ಥಳೀಯರು ಮನವಿ ಸಲ್ಲಿಸಿದರು.

ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ ಜನರಿಂದ ಬೇಡಿಕೆಗಳು ಬಂದವು. ಸಭೆಯಲ್ಲಿ ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ, ಇಒ ಅನಿಲ ರಾಠೋಡ್‌, ಸಂತೋಷ ಗಡಂತಿ, ಶರಣಪ್ಪ ತಳವಾರ, ಲಕ್ಷ್ಮಣ ಆವುಂಟಿ, ಭೀಮಶೆಟ್ಟಿ ಮುರುಡಾ, ಲಕ್ಷ್ಮಣ ಆವುಂಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವಂತರೆಡ್ಡಿ, ಐನೋಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಸೀಮಾಬಿ, ಅಧಿಕಾರಿಗಳಾದ ಅಹೆಮದ್‌ ಹುಸೇನ್‌, ದೀಪಕ ಪಾಟೀಲ, ಪ್ರೇಮಿಲಾ, ಡಾ. ಧನರಾಜ ಬೊಮ್ಮಾ, ಅಜೀಮುದ್ದಿನ್‌, ಶರಣಬಸಪ್ಪ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.