ಚಿಂಚೋಳಿ: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕಲಬುರಗಿ–1 ವಿಭಾಗದ ವ್ಯಾಪ್ತಿಯ ಚಿಂಚೋಳಿ ಬಸ್ ಘಟಕಕ್ಕೆ ನಿತ್ಯ ₹5.80 ಲಕ್ಷ ಆದಾಯ ಬರುತ್ತಿದೆ.
ಈ ಪೈಕಿ ಬೆಂಗಳೂರು, ಹೈದರಾಬಾದ್, ಧಾರವಾಡ ಮತ್ತು ಚಿಂಚೋಳಿ–ಕಲಬುರಗಿ ತಡೆ ರಹಿತ, ಉಜ್ಜಯಿನಿ ಮಾರ್ಗದ ಸಂಚಾರದಿಂದ ಹೆಚ್ಚಿನ ಆದಾಯ ಸಂದಾಯ ಆಗುತ್ತಿದೆ. ಪೌರಾದೇವಿ ಮತ್ತು ಸೊಲಾಪುರ ಬಸ್ ಮಹಾರಾಷ್ಟ್ರ ಗಡಿವರೆಗೆ ಮಾತ್ರ ಸಂಚರಿಸುತ್ತಿವೆ.
ಚಿಂಚೋಳಿ ಘಟಕದಲ್ಲಿ 69 ಬಸ್ಗಳಿದ್ದು, ನಿತ್ಯ 60 ಮಾರ್ಗಗಳಲ್ಲಿ ಓಡುತ್ತಿವೆ. ದಿನದ ಸರಾಸರಿ ಸಂಚಾರ 21 ಸಾವಿರ ಕಿ.ಮೀ ಇದ್ದು, ಉತ್ತಮ ಆದಾಯದ ಮೂಲಕ ಇತರ ಘಟಕಗಳಿಗೆ ಪೈಪೋಟಿ ನೀಡುತ್ತಿವೆ.
95 ಚಾಲಕರು, 97 ಚಾಲಕ ಕಂ. ನಿರ್ವಾಹಕರು, 15 ನಿರ್ವಾಹಕರು ಇದ್ದಾರೆ. 40 ತಾಂತ್ರಿಕ ಸಿಬ್ಬಂದಿ ಪೈಕಿ 12 ಹುದ್ದೆಗಳು ಖಾಲಿಯಾಗಿವೆ. 45 ಬಸ್ಗಳು ಚೆನ್ನಾಗಿದ್ದು, 12 ಬಸ್ ಹಳೆಯದಾಗಿವೆ. ಹೆಚ್ಚಿನ ಸೇವೆ ಗ್ರಾಮೀಣ ಪ್ರದೇಶಕ್ಕೆ ಹೋಗಿ ಬಂದರೆ ಬೆರಳೆಣಿಕೆಯಷ್ಟು ಮಾರ್ಗಗಳಲ್ಲಿ ಬಸ್ ಸಂಚರಿಸಿ ಉತ್ತಮ ಆದಾಯ ತರುತ್ತಿವೆ.
ಚಿಂಚೋಳಿ ಘಟಕದಿಂದ ಭೈರಂಪಳ್ಳಿ, ಮಿರಿಯಾಣ, ಚಿಂಚೋಳಿ ಮತ್ತು ದೋಟಿಕೊಳ, ಖೋದವಂದಪುರ ಹಾಗೂ ತಾದಲಾಪುರಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು ಶಾಸಕ ಡಾ. ಅವಿನಾಶ ಜಾಧವ ಅವರ ಸೂಚನೆ ಮೇರೆಗೆ ಮಾರ್ಗ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಘಟಕ ವ್ಯವ ಸ್ಥಾಪಕ ಅಶೋಕ ಪಾಟೀಲ ತಿಳಿಸಿದರು.
ಚಿಂಚೋಳಿಯಿಂದ ಹಾರಕೂಡಕ್ಕೆ ಶೀಘ್ರವೇ ಬಸ್ ಸಂಚಾರ ಆರಂಭಿಸಲಾಗುವುದು. ಹೈಟೆಕ್ ಬಸ್ ಸೇವೆಗೆ ಪ್ರಯಾಣಿಕರಿಂದ ಬೇಡಿಕೆ ಬಂದರೆ ಈ ಕುರಿತು ಮೇಲಧಿಕಾರಿಗಳ ಜತೆ ಚರ್ಚಿಸಿ ರಾಜಹಂಸ ಮಾದರಿಯ ಬಸ್ ಓಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು.
*
ಚಿಂಚೋಳಿ ಘಟಕದ ಬಸ್ಗಳು ನಿತ್ಯ 21 ಸಾವಿರ ಕಿ.ಮೀ ಸಂಚರಿಸುತ್ತವೆ. ಆದಾಯವೂ ಉತ್ತಮವಾಗಿದ್ದು, ಮುಂಬೈಗೆ ಬಸ್ ಓಡಿಸಿದರೆ ಹೆಚ್ಚಿನ ಆದಾಯ ಬರಬಹುದು
-ಅಶೋಕ ಪಾಟೀಲ, ಚಿಂಚೋಳಿ ಘಟಕ ವ್ಯವಸ್ಥಾಪಕ
*
ಚಿಂಚೋಳಿ, ಕಾಳಗಿ ತಾಲ್ಲೂಕುಗಳ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಕಲಬುರಗಿಯಿಂದ ಬರುತ್ತಾರೆ. ಹೀಗಾಗಿ ಹೈಟೆಕ್ ಬಸ್ ಸೇವೆ ಕಲ್ಪಿಸಬೇಕು
-ವಕೀಲ, ಚಿಂಚೋಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.