ADVERTISEMENT

ರೈಲ್ವೆ ಡಬ್ಲಿಂಗ್‌ ಕಾಮಗಾರಿಗೆ ಅನುದಾನ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 16:12 IST
Last Updated 10 ನವೆಂಬರ್ 2020, 16:12 IST
ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ ಅವರು ಬೆಂಗಳೂರಿನಲ್ಲಿ ಮಂಗಳವಾರ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ ಅವರನ್ನು ಭೇಟಿ ಮಾಡಿದರು
ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ ಅವರು ಬೆಂಗಳೂರಿನಲ್ಲಿ ಮಂಗಳವಾರ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ ಅವರನ್ನು ಭೇಟಿ ಮಾಡಿದರು   

ಕಲಬುರ್ಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ನೀಲೂರು ಗ್ರಾಮದ ಹತ್ತಿರ ರೈಲ್ವೆ ಡಬ್ಲಿಂಗ್‌ ಕಾಮಗಾರಿ ಕೈಗೆತ್ತಿಕೊಂಡಿದ್ದು, ಇದಕ್ಕೆ ಅಗತ್ಯವಿರುವ ₹ 4 ಕೋಟಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂದು ಸಂಸದ ಡಾ.ಉಮೇಶ ಜಾಧವ ಅವರು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ ಅವರಿಗೆ ಮನವಿ ಮಾಡಿದರು.

ಮಂಗಳವಾರ ಬೆಂಗಳೂರಿನಲ್ಲಿ ಭೇಟಿ ಮಾಡಿದ ಸಂಸದರು, ನೀಲೂರು ಗ್ರಾಮದಲ್ಲಿ ಮೈಬೂಬ್‌ ಸುಬಾನಿ ದರ್ಗಾ ಇದ್ದು, ವರ್ಷದಲ್ಲಿ ಎರಡು ಬಾರಿ ಉರುಸ್‌ ನಡೆಯುತ್ತದೆ. ಈ ಉತ್ಸವಕ್ಕೆ ನೆರೆಯ ಮಹಾರಾಷ್ಟ್ರ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಿಂದಲೂ ಅಪಾರ ಭಕ್ತರು ಬರುತ್ತಾರೆ. ಜತೆಗೆ, ಈ ಗ್ರಾಮದ ಸುತ್ತಲಿನ ರೈತರು ಕಬ್ಬು, ಬಾಳೆ ಬೆಳೆಯುತ್ತಾರೆ. ಅವರ ಉತ್ಪನ್ನ ಸಾಗಿಸುವುದಕ್ಕೂ ಮಾರ್ಗದ ಅವಶ್ಯಕತೆ ಇದೆ ಎಂದು ಮನವರಿಕೆ ಮಾಡಿದರು.

ಪ್ರತಿ ದಿನ ಓಡಾಡಲು ಈ ಭಾಗದ ಜನರಿಗೆ ತೊಂದರೆ ಆಗುತ್ತಿದ್ದು, ರೈಲ್ವೆ ಡಬ್ಲಿಂಗ್‌ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಬೇಕಿದೆ. ಈ ಸಂಗತಿಯನ್ನು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿ, ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದೂ ಸಂಸದರು ತಿಳಿಸಿದರು.

ADVERTISEMENT

ಈ ಸಂದರ್ಭ ಸೊಲ್ಲಾಪುರ ರೈಲ್ವೆ ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಸಿಂಗಾಲ್‌, ಬಿಜೆಪಿ ಮುಖಂಡ ವಿಠಲ ಜಾಧವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.