ADVERTISEMENT

ಉಕ್ಕಿ ಹರಿದ ಮುಲ್ಲಾಮಾರಿ ನದಿ

ಚಂದ್ರಂಪಳ್ಳಿ, ನಾಗರಾಳ ಜಲಾಶಯ ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 8:57 IST
Last Updated 17 ಸೆಪ್ಟೆಂಬರ್ 2020, 8:57 IST
ಚಿಂಚೋಳಿ ತಾಲ್ಲೂಕು ಚಿಕ್ಕಲಿಂಗದಳ್ಳಿ ಕೆರೆ ಭೋರ್ಗರೆಯುತ್ತಿರುವುದು
ಚಿಂಚೋಳಿ ತಾಲ್ಲೂಕು ಚಿಕ್ಕಲಿಂಗದಳ್ಳಿ ಕೆರೆ ಭೋರ್ಗರೆಯುತ್ತಿರುವುದು   

ಚಿಂಚೋಳಿ: ತಾಲ್ಲೂಕಿನ ಭಾರಿ ಮಳೆ ಸುರಿದಿದ್ದರಿಂದ ಚಂದ್ರಂಪಳ್ಳಿ ಜಲಾಶಯದಿಂದ 5,495.49 ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಇಷ್ಟೇ ಪ್ರಮಾಣದ ಒಳ ಹರಿವು ಇದೆ.

ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಿಂದ 2,500 ಕ್ಯುಸೆಕ್ ನೀರು ಬಿಡಲಾಗಿದೆ. ಇದರಿಂದ ಮುಲ್ಲಾಮಾರಿ ನದಿ ಪಾತ್ರದಲ್ಲಿ ತುರ್ತು ಪರಿಸ್ಥಿತಿ ಎದುರಾಗಿದ್ದು, ಜನರು ನಿದ್ದೆ ಬಿಟ್ಟು ಸುರಕ್ಷಿತ ತಾಣಗಳಿಗೆ ತಡಕಾಡುತ್ತಿದ್ದಾರೆ.

ಚಂದ್ರಂಪಳ್ಳಿ ಮತ್ತು ನಾಗರಾಳ ಜಲಾಶಯಗಳ ನೀರು ಚಿಂಚೋಳಿ ಪಟ್ಟಣದ ಹಿಂದುಗಡೆ ಐನೋಳ್ಳಿ ದೇಗಲಮಡಿ ಮಧ್ಯೆ ಸಂಗಮವಾಗಿ ಮುಂದೆ ಹರಿಯುತ್ತದೆ. ಇದರಿಂದ ಚಿಂಚೋಳಿ ಮತ್ತು ಕೆಳ ಭಾಗದ ಚಂದಾಪುರ, ಅಣವಾರ, ಭಕ್ತಂಪಳ್ಳಿ, ಗರಕಪಳ್ಳಿ, ಇರಗಪಳ್ಳಿ, ಬುರುಗಪಳ್ಳಿ, ಗಣಾಪುರ, ಕರ್ಚಖೇಡ ಹಾಗೂ ಚತ್ರಸಾಲ್ ಗ್ರಾಮಗಳು ಪ್ರವಾಹದಿಂದ ಬಾಧಿತವಾಗಿವೆ.

ADVERTISEMENT

ನದಿ ನೀರು ಅಕ್ಕಪಕ್ಕದ ಹೊಲಗಳಿಗೆ ನುಗ್ಗಿದೆ. ನೀರಿನ ಪ್ರಮಾಣ ಹೆಚ್ಚಾದರೆ ಗ್ರಾಮಗಳಿಗೆ ನುಗ್ಗುವ ಆತಂಕವಿದೆ. ಚಂದ್ರಂಪಳ್ಳಿ ಹಾಗೂ ನಾಗರಾಳ ಜಲಾಶಯಗಳಲ್ಲದೆ ಖಾನಾಪುರ, ಐನಾಪುರ, ಸಾಲೇಬೀರನಹಳ್ಳಿ, ಹಸರಗುಂಡಗಿ, ತುಮಕುಂಟಾ, ಚಿಕ್ಕಲಿಂಗದಳ್ಳಿ, ನಾಗಾಈದಲಾಯಿ, ಕೊಳ್ಳೂರು ಕೆರೆಗಳು ಭರ್ತಿಯಾಗಿ ಉಕ್ಕೇರಿ ಹರಿಯುತ್ತಿವೆ.

ಈ ನೀರು ಕೂಡ ತೊರೆ ಹಳ್ಳ ಹಾಗೂ ಉಪ ನದಿಗಳ ಮೂಲಕ ಮುಲ್ಲಾಮಾರಿ ಸೇರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮಳೆ ಮುಂದುವರಿದಿದ್ದು ಎರಡೂ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಡುವ ಸಾಧ್ಯತೆಯಿದೆ.

ಮಂಗಳವಾರ ರಾತ್ರಿ ನಾರಾಳ ಜಲಾಶಯಕ್ಕೆ 540 ಕ್ಯುಸೆಕ್‌ ಒಳ ಹರಿವಿದ್ದು 580 ಕ್ಯುಸೆಕ್ ನೀರು ನದಿಗೆ ಬಿಡಲಾಗಿತ್ತು. ಜತೆಗೆ ನಾಗರಾಳ ಜಲಾಶಯಕ್ಕೆ 3,845 ಕ್ಯುಸೆಕ್ ಒಳಹರಿವಿದ್ದು 4,554 ಕ್ಯುಸೆಕ್ ನೀರು ಹೊರ ಬಿಡಲಾಗಿದೆ. ಇದರಿಂದ ಇಡೀ ದಿನ ಮುಲ್ಲಾಮಾರಿ ನದಿಯಲ್ಲಿ ಎದೆಮಟ್ಟ ಪ್ರವಾಹ ಗೋಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.