ಕಲಬುರ್ಗಿ: ಜೇವರ್ಗಿ ತಾಲ್ಲೂಕಿನ ಇಟಗಾ ಗ್ರಾಮದಲ್ಲಿ ಭಾನುವಾರ ಸಾಹಿತಿ, ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರು ಭೀಮಾ ನದಿ ಪ್ರವಾಹದ ಸಂತ್ರಸ್ತರೊಂದಿಗೆ ದೀಪಾವಳಿ ಆಚರಿಸಿದರು.
ಬೆಂಗಳೂರಿನ ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ ಹಾಗೂ ಟೆಂಟ್ ಸಿನಿಮಾ ಶಾಲೆ ಆಶ್ರಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅವರು 100ಕ್ಕೂ ಸಂತ್ರಸ್ತರಿಗೆ ಆಹಾರ ಧಾನ್ಯ ವಿತರಿಸಿದರು. ಸಂತ್ರಸ್ತರ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ, ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ನಾಗತಿಹಳ್ಳಿಯವರು ಮಾತನಾಡಿ, ‘ಸಂಕಷ್ಟಕ್ಕೆ ಸಿಲುಕಿರುವ ನಮ್ಮ ಹಳ್ಳಿಗಳನ್ನು ನಾವೇ ಸುಧಾರಿಸಿಕೊಳ್ಳಬೇಕು. ಬೇರೆಯವರು ಬಂದು ಕಷ್ಟ ನೀಗಿಸುತ್ತಾರೆ ಎಂದು ಕಾಯಕೂಡದು. ಒಂದು ಹಳ್ಳಿಯಲ್ಲಿ ಹತ್ತು ಯುವಕರು, ಹತ್ತು ಯುವತಿಯರು ಹಾಗೂ ಹತ್ತು ಮಕ್ಕಳು ಸೇರಿ ಗುಂಪು ಕಟ್ಟಿಕೊಂಡರೆ ಸಾಕು; ಸಾಕಷ್ಟು ಬದಲಾವಣೆ ತರಬಹುದು. ಇದನ್ನು ನಾನು ನನ್ನ ಹುಟ್ಟೂರಾದ ನಾಗತಿಹಳ್ಳಿಯಲ್ಲಿ ಪ್ರಯೋಗ ಮಾಡಿದ್ದೇನೆ. ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬಿ, ಭಾವನಾತ್ಮಕ ಸಂಬಂಧ ಬೆಸೆದುಕೊಳ್ಳಲು ಬಂದಿದ್ದೇನೆ’ ಎಂದರು.
ಶನಿವಾರವೇ ಗ್ರಾಮಕ್ಕೆ ಭೇಟಿ ನೀಡಿದ ಅವರು ಅಲ್ಲಿನ ಯುವಕರು, ಸಂತ್ರಸ್ತ ಮಹಿಳೆಯರು ಹಾಗೂ ರೈತರನ್ನು ಮಾತನಾಡಿಸಿ, ಸಂಕಷ್ಟ ಆಲಿಸಿದರು. ನಂತರ ಹತ್ತಿರದ ದೇವಲ ಗಾಣಗಾಪುರ ಕ್ಷೇತ್ರಕ್ಕೆ ಭೇಟಿ ನೀಡಿ ದತ್ತಾತ್ರೇಯನ ದರ್ಶನ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.