ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಿಂದ 2500 ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ ಎಂದು ಮುಲ್ಲಾಮಾರಿ ಯೋಜನೆಯ ಎಇಇ ಅಮೃತ ಪವಾರ ತಿಳಿಸಿದರು.
ಜಲಾಶಯದಿಂದ ನದಿಗೆ ನೀರು ಬಿಟ್ಟಿರುವುದರಿಂದ ಮುಲ್ಲಾಮಾರಿ ನದಿ ಪಾತ್ರದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಇದರಿಂದ ತಾಜಲಾಪುರದ ಸೇತುವೆ ಮುಳುಗಡೆಯಾಗಿದ್ದು ಗ್ರಾಮಸ್ಥರು ಸಂಪರ್ಕದಿಂದ ವಂಚಿತರಾಗಿದ್ದಾರೆ. ಬೇರೆ ಊರಿಗೆ ತೆರಳಿದ್ದ ತಾಜಲಾಪುರ ಗ್ರಾಮದ ವ್ಯಕ್ತಿ ನಿಖಿಲ ರಾಮತೀರ್ಥ ಎಂಬುವವರು ಮಧ್ಯ ರಾತ್ರಿ ಕಾರಿನಲ್ಲಿಗ್ರಾಮಕ್ಕೆ ಮರಳುವಾಗ ಸೇತುವೆ ಮುಳುಗಿದ್ದರಿಂದ ಬೆಳಗಾಗುವವರೆಗೆ ರಸ್ತೆಯಲ್ಲಿಯೇ ಇಡಿ ರಾತ್ರಿ ಕಳೆದ ಘಟನೆ ನಡೆದಿದೆ ಎಂದು ಗ್ರಾಮಸ್ಥರು ಪ್ರಜಾವಾಣಿಗೆ ತಿಳಿಸಿದ್ದಾರೆ.
ಜಲಾಶಯದ ಎರಡು ಗೇಟುಗಳ ಮೂಲಕ 2,500 ಕ್ಯೂಸೆಕ್ ನೀರು ಹೊರ ಬಿಟ್ಟರೆ, ಬೆಳಗಿನ ಜಾವ ಒಂದು ಗೇಟು ಬಂದ್ ಮಾಡಿ ಹೊರಹರಿವನ್ನು 430 ಕ್ಯೂಸೆಕ್ ಗೆ ತಗ್ಗಿಸಲಾಗಿದೆ. ಸದ್ಯ ಜಲಾಶಯಕ್ಕೆ 1,600 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ರೈತರು ಜಾನುವಾರುಗಳೊಂದಿಗೆ ನದಿಗೆ ಇಳಿಯುವುದಾಗಲಿ, ಕಾರ್ಮಿಕರು, ಮೀನುಗಾರರು ಮತ್ತು ಮಹಿಳೆಯರು ನದಿಗೆ ಬಟ್ಟೆ ತೊಳೆಯಲು ಹೋಗಬಾರದು ಎಂದು ಎಇಇ ಅಮೃತ ಪವಾರ ಮತ್ತು ಎಇ ವಿನಾಯಕ ಚವಾಣ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.