ಕಲಬುರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ಗ್ರಾಮ ಪಂಚಾಯಿತಿಯವರು ಉದ್ಯೋಗ ನೀಡುತ್ತಿಲ್ಲ. ಉದ್ಯೋಗ ನೀಡಲು ವಿಫಲವಾದರೆ ನಿರುದ್ಯೋಗ ಭತ್ಯೆ ನೀಡಬೇಕಿದ್ದು, ಅದನ್ನೂ ನೀಡಿಲ್ಲ ಎಂದು ಆರೋಪಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್)ಯ ಸದಸ್ಯರು ಸೋಮವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಕಿಣ್ಣಿ ಸಡಕ್, ಜೀವಣಗಿ, ಮರಗುತ್ತಿ, ಡೊಂಗರಗಾಂವ, ಕೋಡ್ಲಿ, ಆಲೂರ, ಕಾಚಾಪೂರ, ಬಿಳವಾರ, ಕುಸನೂರ, ನಂದೂರ, ಬೆಳಮಗಿ ಗ್ರಾಮಗಳಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದರೂ ಪಿಡಿಒಗಳು ಕೆಲಸ ನೀಡಿಲ್ಲ. ಪ್ರತ್ಯೇಕ ಎನ್ಎಂಆರ್ ನೀಡಬೇಕು. ಕಳೆದ ಜುಲೈ ತಿಂಗಳಲ್ಲಿ ಪ್ರತಿಭಟನೆ ನಡೆಸಿದಾಗ 15 ದಿನಗಳಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಿಡಿಒಗಳ ಸಭೆ ಕರೆದು ಬಗೆ ಹರಿಸುವುದಾಗಿ ತಿಳಿಸಿದ್ದರೂ ಇನ್ನೂ ಬಗೆಹರಿದಿಲ್ಲ ಎಂದು ಆರೋಪಿಸಿದರು.
ಸಂಘಟನೆಯ ಮುಖಂಡರಾದ ಮಾನಿಂಗಪ್ಪಾ ಮಾಲಗತ್ತಿ, ಶರಣಗೌಡ, ರುಕ್ಮಿಣಿ ಮಣ್ಣೂರ, ಚನ್ನಮ್ಮ ಹೂಗಾರ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.