ಕಮಲಾಪುರ: ‘ಕೈಮಗ್ಗಗಳು ಗ್ರಾಮೀಣ ಭಾರತದ ಜೀವನಾಡಿಯಾಗಿದ್ದು, ನೇಕಾರರು ನಮ್ಮ ಪರಂಪರೆಯ ರಕ್ಷಕರು’ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಪಟ್ಟಣದಲ್ಲಿ ಗುರುವಾರ ನೇಕಾರ ಸಮುದಾಯದ ವತಿಯಿಂದ ಆಯೋಜಿಸಿದ್ದ 11ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸ್ವಾತಂತ್ರ್ಯ ಚಳವಳಿಯಲ್ಲಿ ಕೈಮಗ್ಗ ವಲಯ ಪ್ರಮುಖ ಪಾತ್ರ ವಹಿಸಿತ್ತು. ಕೇಂದ್ರ ಸರ್ಕಾರವು ಆ.7 ರಾಷ್ಟ್ರೀಯ ಕೈಮಗ್ಗ ದಿನವೆಂದು ಘೋಷಿಸಿದೆ. ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ನೇಕಾರರ ಕೊಡುಗೆ ಗುರುತಿಸಲು, ಕೈಮಗ್ಗ ಪರಂಪರೆ ಸಂರಕ್ಷಿಸಲು ಮತ್ತು ಉತ್ತೇಜಿಸಲು ಆಚರಿಸಲಾಗುತ್ತದೆ’ ಎಂದರು.
ಕಮಲಾಪುರ ನೇಕಾರ ಸಮುದಾಯಕ್ಕೆ ಭವನ ಸೇರಿದಂತೆ ಕೈಲಾದ ಸವಲತ್ತುಗಳನ್ನು ಒದಗಿಸಿದ್ದೇನೆ ಎಂದರು.
ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ಸಂಗಾ ಮಾತನಾಡಿ, ‘ಕಮಲಾಪುರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ನೇಕಾರ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು’ ಒತ್ತಾಯಿಸಿದರು.
ನಿವೃತ್ತ ನೌಕರರಿಗೆ, ವಿವಿಧ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಬಿಜೆಪಿಯ ಗ್ರಾಮೀಣ ಮಂಡಲ ಉಪಾಧ್ಯಕ್ಷ ಶಿವಕುಮಾರ ದೋಶೆಟ್ಟಿ, ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಾಂತಕುಮಾರ ಯಳಸಂಗಿ, ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಗೌಡಗೋಳ, ನೇಕಾರ ನೌಕರರ ಸಹಕಾರಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಲಿಂಗಪ್ಪ ಡಾವರಗಾಂವ, ದೇವರ ದಾಸಿಮಯ್ಯ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶಿವಪುತ್ರಪ್ಪ ಡಾವರಗಾಂವ, ನೇಕಾರ ಸೇವಾ ಸಮಿತಿ ಶಿವಕುಮಾರ ಮರತೂರ, ಜೇಡರ ದಾಸಿಮಯ್ಯ ಸಮಾಜ ಸೇವಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ದಾಸಿಮಯ್ಯ ವಡ್ಡನಕೇರಿ, ನಾಗರಾಜ ಹುಣಚಿಗಿಡ, ಸಂಗಪ್ಪ ಮರಕುಂದಿ, ಶ್ರೀಮಂತ ಬೇನೂರ, ಭೀಮಾಶಂಕರ ರಾಜೇಶ್ವರ, ರಾಜಶೇಖರ ಮಾಗಾ, ಅರುಣಕುಮಾರ ಮೂಲಿಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.