ಆಳಂದ: ದೇಶದಲ್ಲಿ ಕಾಂಗ್ರೆಸ್ ಪಕ್ಷವು ಸಂಪೂರ್ಣ ನೆಲೆ ಕಳೆದುಕೊಂಡಿದೆ. ಅದಕ್ಕಾಗಿ ಅಲ್ಪಸಂಖ್ಯಾತರಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಬಗೆಗೆ ಆತಂಕ ಮೂಡಿಸಿ ಎಲ್ಲಡೆ ಗೊಂದಲ ಸೃಷ್ಟಿಸಲು ಮುಂದಾಗಿದೆ ಎಂದು ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ಆರೋಪಿಸಿದರು.
ಪಟ್ಟಣದಲ್ಲಿ ಗುರುವಾರ ಬಿಜೆಪಿ ಏರ್ಪಡಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ಪರ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಯ್ದೆಯಿಂದ ಮುಸ್ಲಿಂ ಬಾಂಧವರಿಗೆ ಅಪಾಯವಿಲ್ಲ, ಬಾಂಗ್ಲಾ, ಪಾಕಿಸ್ತಾನದಿಂದ ಬಂದು ನಮ್ಮ ದೇಶದ ಶಾಂತಿಗೆ ದಕ್ಕೆ ಉಂಟುಮಾಡುವ ವ್ಯಕ್ತಿಗಳನ್ನು ಮಾತ್ರ ಈ ಕಾಯ್ದೆ ಹೊರ ಹಾಕಲಿದೆ ಎಂದರು.
ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, ‘ಬಿಜೆಪಿ ಸರ್ಕಾರದಲ್ಲಿ ನನಗೆ ಮಂತ್ರಿ ಸ್ಥಾನ ಬೇಡ, ನಮ್ಮ ತಾಲ್ಲೂಕಿಗೆ ಗಂಡೂರಿ ನಾಲಾದಿಂದ ನೀರು ಹರಿಸಿದರೆ ಸಾಕು, ನಾನು ಪ್ರಧಾನಿ ಆದಷ್ಟು ಖುಷಿ ಆಗುತ್ತದೆ’ ಎಂದರು.
ಜಿಲ್ಲೆಯ ಬಿಜೆಪಿ ಶಾಸಕರು, ಮುಖಂಡರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಮ್ಮ ಬೇಡಿಕೆ ಈಡೇರಿಸಬೇಕು. ಮುಂಬರುವ ಬಜೆಟ್ನಲ್ಲಿ ಶಾಶ್ವತ ಕುಡಿಯುವ ನೀರು ಪೂರೈಸುವ ಈ ಯೋಜನೆಗೆ ಆದ್ಯತೆ ನೀಡಲು ಒತ್ತಾಯಿಸಿದರು.
ಶಾಸಕ ಬಸವರಾಜ ಮತ್ತಿಮೂಡ, ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಿ, ಮಾಜಿ ಅಧ್ಯಕ್ಷ ದೋಡ್ಡಪ್ಪಗೌಡ ಪಾಟೀಲ, ತಾಲ್ಲೂಕಾಧ್ಯಕ್ಷ ಆನಂದರಾವ ಪಾಟೀಲ, ಮುಖಂಡ ಜಗಧೀಶ ಶಾಸ್ತ್ರಿ ಮಾತನಾಡಿದರು.
ಜಿಲ್ಲಾ ಘಟಕದ ಉಪಾಧ್ಯಕ್ಷ ನಾಮದೇವ ರಾಠೋಡ, ಸಂಜಯ ಮೀಸ್ಕಿನ್, ದಿವ್ಯಾ ಹಾಗರಗಿ, ವಿಶ್ವನಾಥ ತಡಕಲ, ನಿಜಲಿಂಗಪ್ಪ ಕೊರಳ್ಳಿ, ಶಿವಪುತ್ರಪ್ಪ ಪಾಟೀಲ, ಮಹಾಂತಪ್ಪ ಆಲೂರೆ, ಗುರುಶಾಂತಪ್ಪ ಪಾಟೀಲ, ಮಲ್ಲಣ್ಣಾ ನಾಗೂರೆ, ಅಶೋಕ ಗುತ್ತೇದಾರ, ರಾಜಶೇಖರ ಮಲಶೇಟ್ಟಿ, ಮಲ್ಲಿಕಾರ್ಜುನ ಕಂದಗೊಳೆ, ವೀರಪ್ಪ ಹತ್ತರಕಿ, ಕೆ.ಟಿ.ರಾಠೋಡ ಇದ್ದರು.
ಬಿಜೆಪಿ ಮಂಡಲದ ನೂತನ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ ಅವರ ಪದಗ್ರಹಣ ನಡೆಯಿತು. ಶಾಸಕ ಗುತ್ತೇದಾರ, ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ಮತ್ತು ತಾಲ್ಲೂಕು ಅಧ್ಯಕ್ಷ ಆನಂದ ಪಾಟೀಲ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಪಕ್ಷದ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪೌರತ್ವ ಕಾಯ್ದೆ ಪರ ಭಿತ್ತಿಪತ್ರಗಳನ್ನು ಹಂಚಿ ಅರಿವು ಮೂಡಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.