ಕಲಬುರಗಿ: ನಗರದ ಹೊರವಲಯದ ಕುಸನೂರು ಸಮೀಪದ ಬುಡ್ಗ ಜಂಗಮ ಕಾಲೊನಿಯಲ್ಲಿ ಬೇಸಿಗೆ ಬಂತೆಂದರೆ ನೀರಿಗಾಗಿ ಪರದಾಡುವುದು ಸಾಮಾನ್ಯ ಎಂಬಂತಾಗಿದೆ.
ಕಳೆದ 12 ವರ್ಷಗಳಿಂದ ಬೇರೆ ಕಡೆಗಳಿಂದ ಇಲ್ಲಿಗೆ ಬಂದು ನೆಲೆಸಿರುವ ಅಲೆಮಾರಿ ಬುಡ್ಗ ಜಂಗಮ ಸಮುದಾಯದ ಒಂದು ಸಾವಿರಕ್ಕೂ ಅಧಿಕ ಜನ ಇಲ್ಲಿನ ನೂರಾರು ಗುಡಿಸಲುಗಳಲ್ಲಿ ನೆಲೆ ಕಂಡುಕೊಂಡಿದ್ದು, ನೀರಿಗಾಗಿ ಪರಿತಪಿಸುವಂತಾಗಿದೆ. ಮುಂಗಾರು ಪೂರ್ವ ಮಳೆ ಗಾಳಿ ಶುರುವಾಗಿರುವುದರಿಂದ ಜೆಸ್ಕಾಂ ಯಾವಾಗ ಬೇಕೆಂದರೆ ಆವಾಗ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಬೋರ್ವೆಲ್ನಿಂದ ನೀರು ಎತ್ತುವುದು ಕಷ್ಟವಾಗುತ್ತಿದೆ ಎಂದು ನಿವಾಸಿಗಳು ಗೋಳು ತೋಡಿಕೊಳ್ಳುತ್ತಿದ್ದಾರೆ.
ಪ್ರತಿ ಬೇಸಿಗೆಯ ಸಂದರ್ಭದಲ್ಲಿ 45 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ಸೆಖೆಯಲ್ಲಿಯೂ ಹೆಣ್ಣುಮಕ್ಕಳು, ಚಿಕ್ಕಮಕ್ಕಳು ಹನಿ ನೀರಿಗಾಗಿ ಕೊಡ ಹಿಡಿದುಕೊಂಡು ಬೋರ್ವೆಲ್ ಬಳಿ ಬರಬೇಕಿದೆ.
ಶಹಾಬಾದ್ ರಸ್ತೆಯ ನೃಪತುಂಗ ನಗರಕ್ಕೆ ಹೊಂದಿಕೊಂಡ ಖಾಲಿ ಜಾಗದಲ್ಲಿ ನೂರಾರು ಗುಡಿಸಲುಗಳನ್ನು ಹಾಕಿಕೊಂಡು ಕನಿಷ್ಠ ಸೌಲಭ್ಯಗಳೂ ಇಲ್ಲದೇ ಬುಡ್ಗ ಜಂಗಮ ಸಮುದಾಯದವರು ವಾಸವಾಗಿದ್ದು, ಹೊಟ್ಟೆ ಪಾಡಿಗಾಗಿ ಹೇರ್ಪಿನ್, ಹೇರ್ಬೆಂಡ್ನಂತಹ ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ಇಡೀ ದಿನ ಕೆಲಸ ಮಾಡದಿದ್ದರೆ ಹೊಟ್ಟೆ ತುಂಬದ ಪರಿಸ್ಥಿತಿ ಇದೆ. ಬಹುತೇಕ ಜನರ ಬಳಿ ಪಡಿತರ ಚೀಟಿಗಳು ಇವೆಯಾದರೂ ಇತರೆ ಖರ್ಚುಗಳಿಗೆ ದುಡಿಯುವುದು ಅನಿವಾರ್ಯವಾಗಿದೆ. ಬೋರ್ವೆಲ್ನಿಂದ ನೀರೆತ್ತಿ ಸಂಪ್ಗೆ ಹಾಕಬೇಕೆಂದರೆ ಅದು ಸೋರಿಕೆಯಾಗುತ್ತಿದೆ. ಹೀಗಾಗಿ, ವಿದ್ಯುತ್ ಸಂಪರ್ಕ ಇದ್ದಾಗಲೇ ಬೋರ್ವೆಲ್ನಿಂದ ನೀರು ಪಡೆಯುವುದು ಅನಿವಾರ್ಯ ಎನ್ನುತ್ತಾರೆ ಬುಡ್ಗ ಜಂಗಮ ಕಾಲೊನಿಯ ನಿವಾಸಿಗಳು.
ಇತ್ತೀಚೆಗೆ ಕರ್ನಾಟಕ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಅವರು ಕಾಲೊನಿಗೆ ಭೇಟಿ ನೀಡಿ ನಿವಾಸಿಗಳ ಅಹವಾಲನ್ನು ಆಲಿಸಿದ್ದರು. ಆಗ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆಯನ್ನೇ ಪ್ರಧಾನವಾಗಿ ಚರ್ಚಿಸಿದ್ದಾರೆ. ಆದಾಗ್ಯೂ, ಸಮರ್ಪಕ ನೀರು ಪೂರೈಕೆ ವ್ಯವಸ್ಥೆ ಆಗಿಲ್ಲ ಎಂಬುದು ನಿವಾಸಿಗಳ ಬೇಸರಕ್ಕೆ ಕಾರಣವಾಗಿದೆ.
ದಿನಾಲೂ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವ ಬುಡ್ಗ ಜಂಗಮ ಕಾಲೊನಿ ನಿವಾಸಿಗಳ ಬಳಕೆಗೆ ಒಂದೇ ಬೋರ್ವೆಲ್ ಇದೆ. ಹೀಗಾಗಿ ಇನ್ನೂ ಎರಡು ಬೋರ್ವೆಲ್ ಕೊರೆಸುವುದಾಗಿ ನೀಡಿದ ಭರವಸೆಯನ್ನು ಅಧಿಕಾರಿಗಳು ಈಡೇರಿಸಬೇಕುಮರಲಿಂಗಯ್ಯ ಬುಡ್ಗ ಜಂಗಮ ಸಮುದಾಯದ ಮುಖಂಡ
ಬುಡ್ಗ ಜಂಗಮರಿಗಿಲ್ಲ ವಸತಿ ಮೊದಲು
ರಾಜಾಪುರದ ಪ್ರಶಾಂತ ನಗರದಲ್ಲಿ ಬುಡ್ಗ ಜಂಗಮ ಸಮುದಾಯದವರು ನೆಲೆ ನಿಂತಿದ್ದರು. ನಂತರ ಶಹಾಬಾದ್ ರಸ್ತೆಯ ನೃಪತುಂಗ ಕಾಲೊನಿ ಪಕ್ಕದ ಖಾಲಿ ಜಾಗದಲ್ಲಿ ಒಂದು ದಶಕದಿಂದ ಗುಡಿಸಲುಗಳನ್ನು ಹಾಕಿಕೊಂಡು ಕಷ್ಟದ ಜೀವನ ನಡೆಸುತ್ತಿದ್ದಾರೆ. ಮಳೆ ಬಂತೆಂದರೆ ಸಾಕು ಜೀವನವೇ ಸಾಕು ಎನಿಸುತ್ತದೆ. ಬಟ್ಟೆಗಳೆಲ್ಲ ತೊಯ್ದು ಹೋಗುತ್ತವೆ. ಅಡುಗೆ ಮಾಡಿಕೊಳ್ಳಲು ಸಂಗ್ರಹಿಸಿದ ಉರುವಲುಗಳೂ ತೊಯ್ದು ಅನ್ನಕ್ಕೆ ಪರದಾಡಬೇಕಾಗುತ್ತದೆ. ಇದುವರೆಗೂ ನಮಗೆ ಆಶ್ರಯ ಯೋಜನೆ ಸೇರಿದಂತೆ ಯಾವುದೇ ಸರ್ಕಾರಿ ವಸತಿ ಯೋಜನೆಗಳ ಅಡಿ ಮನೆಗಳನ್ನು ಕಟ್ಟಿಸಿಕೊಟ್ಟಿಲ್ಲ ಎನ್ನುತ್ತಾರೆ ಬುಡ್ಗ ಜಂಗಮ ಸಮುದಾಯದ ಮುಖಂಡ ಮರಿಲಿಂಗಪ್ಪ. ದುಡಿದು ಕೂಡಿಟ್ಟ ಹಣದಲ್ಲಿಯೇ ಅಣ್ಣ ತಮ್ಮಂದಿರು ರೊಕ್ಕ ಹಾಕಿ ಇಲ್ಲಿ 50 ನಿವೇಶನಗಳನ್ನು ಖರೀದಿಸಿದ್ದು ಅಲ್ಲಿ ಮನೆ ನಿರ್ಮಾಣಕ್ಕೆ ಜಿಲ್ಲಾಡಳಿತ ಹಣಕಾಸು ನೆರವು ನೀಡಬೇಕು ಎಂದು ಅವರು ಒತ್ತಾಯಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.